ಸಕಲೇಶಪುರ: ಶಿರಾಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ.ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲು ಬಳಿ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಮೂರ್ನಾಲ್ಕು ವಾಹನಗಳು ಮಣ್ಣಿನಲ್ಲಿ ಸಿಲುಕಿ ಹಾಕಿಕೊಂಡಿವೆ.
ಗುಡ್ಡ ಕುಸಿತದ ರಭಸಕ್ಕೆ ಒಂದು ಕಂಟೈನರ್ ಪಲ್ಟಿಯಾಗಿದ್ದು, ಮತ್ತೊಂದು ಬೃಹತ್ ಕಂಟೈನರ್ ಹಾಗೂ ಇತರ ವಾಹನಗಳು ಸಿಲುಕಿದ್ದು, ಪಲ್ಟಿಯಾಗಿರುವ ಕಂಟೈನರ್ನಲ್ಲಿ ಚಾಲಕ ಸಿಲುಕಿಕೊಂಡಿದ್ದರು.
ಮತ್ತೊಂದು ಕಂಟೈನರ್ ಮತ್ತು ಟ್ಯಾಂಕರ್ ನಲ್ಲಿ ಸಿಲುಕಿದ್ದ ಚಾಲಕರು ಸೇರಿ ಮೂವರು ಚಾಲಕರನ್ನು ಹೆದ್ದಾರಿ ನಿರ್ಮಾಣ ಕಂಪನಿಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಿಗ್ಗೆ ಇದೇ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಜೆ ವೇಳೆಗೆ ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಗುಡ್ಡ ಕುಸಿತವಾಗಿದೆ.
ಮಣ್ಣಿನ ರಾಶಿ ಕುಸಿದಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ಸ್ಥಗಿತವಾಗಿದ್ದು, ನೂರಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿಯೇ ಬಾಕಿಯಾಗಿವೆ.