ಚೆನ್ನೈ:ಎಟಿಎಂನ ಕಸದ ಬುಟ್ಟಿಗೆ ಮಹಿಳೆಯೊಬ್ಬಳು ಬರೋಬ್ಬರಿ 15 ಲಕ್ಷ ರೂಪಾಯಿ ಬೆಲೆ ಬಾಳುವ 43 ಪವನ್ ಚಿನ್ನಾಭರಣವನ್ನು ಎಸೆದು ಹೋದ ಘಟನೆ ಚೆನ್ನೈ ಉಪನಗರ ಕುಂದ್ರಥೂರಿನ ಮುರುಗನ್ ದೇವಸ್ಥಾನದ ರಸ್ತೆಯಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಚಿನ್ನಾಭರಣ ಎಸೆದವರು ಮಾನಸಿಕ ಅಸ್ವಸ್ಥಳು ಎಂದು ತಿಳಿದು ಬಂದಿದೆ. ಖಿನ್ನತೆಯಿಂದ ಬಳಲುತ್ತಿರುವ ಮಹಿಳೆ ಎಟಿಎಂಗೆ ತೆರಳಿ ಚಿನ್ನಾಭರಣ ಕಸದ ಬುಟ್ಟಿಗೆ ಎಸೆದಿದ್ದಾಳೆ ಎನ್ನಲಾಗಿದೆ. ಕಸದ ಬುಟ್ಟಿಯ ಒಳಗೆ ಬ್ಯಾಗ್ ಇರುವುದನ್ನು ನೋಡಿದ ಎಟಿಎಂನ ಭದ್ರತಾ ಸಿಬ್ಬಂದಿ ತಕ್ಷಣ ಕುಂದ್ರಥೂರ್ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ ಅದರೊಳಗೆ ಚಿನ್ನಾಭರಣಗಳು ಇದ್ದವು ಎಂದು ಭದ್ರತಾ ಸಿಬ್ಬದಿ ಪೊಲೀಸರಿಗೆ ತಿಳಿಸಿದ್ದಾರೆ.ಇದಾದ ಬಳಿಕ ಎಟಿಎಂಗೆ ಸಂಬಂಧಿಸಿದ ಬ್ಯಾಂಕ್ನ ಮ್ಯಾನೇಜರ್ ನೆರವು ಪಡೆದು ಪೊಲೀಸ್ ದೂರು ದಾಖಲಿಸಲಾಯಿತು.
ತನಿಖಾ ವೇಳೆ ಪೊಲೀಸರು ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಓರ್ವ ಮಹಿಳೆ ಎಟಿಎಂ ಒಳಗೆ ಬಂದು ಚಿನ್ನಾಭರಣವನ್ನು ಕಸದ ಬುಟ್ಟಿಯ ಒಳಗೆ ಎಸೆದಿರುವುದು ಗೊತ್ತಾಗಿದೆ.