ಮಂಗಳೂರು: ಪಾಳುಬಾವಿಗೆ ಬಿದ್ದ ಬೆಕ್ಕಿನ ಮರಿಯೊಂದನ್ನು ಮಹಿಳೆಯೊಬ್ಬರು ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿರುವ ಘಟನೆ ನಗರದ ಜೆಪ್ಪುವಿನಲ್ಲಿ ನಡೆದಿದೆ.
ಬಾವಿಗಿಳಿದು ಬೆಕ್ಕಿನ ಮರಿ ಮೇಲೆತ್ತಿರುವ ರಜನಿ ಶೆಟ್ಟಿ ಅವರು ಜೆಪ್ಪುವಿನ ಸಂದೀಪ್ ಎಂಬವರ ಮನೆಯ ಪಕ್ಕದಲ್ಲಿದ್ದ ಪಾಳು ಬಾವಿಗೆ ಬೆಕ್ಕಿನ ಮರಿ ಬಿದ್ದಿತ್ತು. ಆದರೆ ಮೇಲೆ ಬರಲಾಗದೆ ಕಲ್ಲೊಂದನ್ನು ಆಶ್ರಯಿಸಿ ಕುಳಿತಿತ್ತು. ಈ ಬಗ್ಗೆ ಸಂದೀಪ್ ಅವರು ಪ್ರಾಣಿ ಪ್ರಿಯೆ ರಜನಿ ಶೆಟ್ಟಿ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅವರು, ಸೊಂಟಕ್ಕೆ ಹಗ್ಗ ಬಿಗಿದು ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಗರದ ಯಾವುದೇ ಭಾಗದಲ್ಲಿ ಪ್ರಾಣಿಗಳು ಬಾವಿಗೆ ಬಿದ್ದರೂ ಮೊದಲು ಕರೆ ಹೋಗುವುದು ಪ್ರಾಣಿಪ್ರಿಯೆ ರಜನಿ ಶೆಟ್ಟಿ ಅವರಿಗೆ. ಅವರು ಈ ಹಿಂದೆಯೂ ಇದೇ ರೀತಿ ಸಾಕಷ್ಟು ಬಾರಿ ಬಾವಿಗೆ ಬಿದ್ದಿದ್ದ ಬೆಕ್ಕು, ನಾಯಿಗಳನ್ನು ರಕ್ಷಿಸಿದ್ದಾರೆ. ಶ್ವಾನಪ್ರಿಯೆಯಾಗಿರುವ ಇವರ ಮನೆಯಲ್ಲಿ 40ಕ್ಕಿಂತಲೂ ಅಧಿಕ ನಾಯಿಗಳಿವೆ. ಅಲ್ಲದೆ, ದಿನವೂ ಸಾಕಷ್ಟು ಬೀದಿ ನಾಯಿಗಳಿಗೆ ಅನ್ನ ನೀಡುತ್ತಾರೆ ಎನ್ನುವುದು ವಿಶೇಷ.