ಮಂಗಳೂರು:ನೌಕಾಪಡೆಯ ನಿವೃತ್ತ ಅಧಿಕಾರಿ, ಮಂಗಳೂರು ಮೂಲದ ಕಮಾಂಡೋರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ ರಾವ್ (95) ಚೆನ್ನೈಯಲ್ಲಿ ಸೋಮವಾರ ನಿಧನ ಹೊಂದಿದ್ದು, ಚೆನ್ನೈಯ ಬಸಂತನಗರದಲ್ಲಿ ಸಕಲ ಸೇನಾ ಗೌರವದೊಂದಿಗೆ ಅಂತಿಮ ಸಂಸ್ಕಾರವನ್ನು ನಡೆಸಲಾಗಿದೆ.
1971ರಲ್ಲಿ ಪಾಕಿಸ್ಥಾನವು ಯುದ್ಧ ಘೋಷಿಸದೆ ಭಾರತದ ಮೇಲೆ ಆಕ್ರಮಣವೆಸಗಿದಾಗ ಕರಾಚಿ ಬಂದರಿನ ಮೇಲೆ ದಾಳಿ ನಡೆಸಲು ಭಾರತೀಯ ಸೇನೆಯು ರಾವ್ ಅವರಿಗೆ ಸೂಚಿಸಿತ್ತು. ಇದು ಭಾರತದ ಕಡೆಯಿಂದ ನಡೆದ ಮೊದಲ ನೌಕಾ ಪಡೆ ಕಾರ್ಯಾಚರಣೆ. 1971ರ ಡಿ. 4ರ ರಾತ್ರಿ ರಾವ್ ನೇತೃತ್ವದ ಸಣ್ಣ ತಂಡ ಕರಾಚಿ ಬಂದರಿನ ಮೇಲೆ ಎರಗಿತು. ಶತ್ರುಗಳ ಕಡೆಯಿಂದ ಭಾರೀ ಗುಂಡಿನ ದಾಳಿ ನಡೆದರೂ ರಾವ್ ಅವರ ತಂಡ ಶತ್ರು ನಾಶದಲ್ಲಿ ಯಶಸ್ಸು ಪಡೆಯಿತು.
ನೌಕಾಪಡೆಯು ಪ್ರತೀ ವರ್ಷ ಡಿ. 4ರಂದು ಈ ಯಶಸ್ವೀ ಕಾರ್ಯಾಚರಣೆಯ ದಿನವನ್ನು ಆಚರಿಸುತ್ತಿದೆ. ರಾವ್ ಅವರಿಗೆ ಮೊದಲ ಮಹಾವೀರ ಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.
1926ರಲ್ಲಿ ಮಧುರೈಯಲ್ಲಿ ಜನಿಸಿದ ಅವರು 1950ರಲ್ಲಿ ನೌಕಾಪಡೆ ಸೇರಿದ್ದರು. ಅವರು ಪತ್ನಿ ರಾಧಾ ರಾವ್, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.