ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಗಿಸಿ ಮಹಿಳಾ ಕಾರ್ಮಿಕರೊಬ್ಬರು ಕೆಲಸ ಕಳೆದುಕೊಂಡಿದ್ದಾರೆ.
ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲವ್ವ ಎಂಬುವವರು ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಟ್ಟೆ ಹಾಸಿ, ಶಾವಿಗೆ ಒಣಗಿಸಲು ಹಾಕಿದ್ದರು. ಬೆಳಿಗ್ಗೆ ಸೈಕ್ಲಿಂಗ್ ಹೋಗಿದ್ದ ಕೆಲವರು ಇದನ್ನು ಕಂಡು ಫೋಟೊ ತೆಗೆದು ವಾಟ್ಸಾಫ್ ಪ್ನಲ್ಲಿ ಹರಿಬಿಟ್ಟಿದ್ದರು. ಆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದಿನ ಹರಿದಾಡಿದವು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶಾವಿಗೆ ತೆಗೆಸಿದ್ದಾರೆ.
ಇನ್ನು ‘ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ಚಳಿಗಾಲದ ಅಧಿವೇಶನಕ್ಕಾಗಿ ಇದನ್ನು ಬಳಸುತ್ತಾರೆ. ಉಳಿದಂತೆ ಭೂತಬಂಗಲೆಯಂತೆ ಬಿಟ್ಟುಬಿಡುತ್ತಾರೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆ ಮಾಡಬೇಕು, ಇಡೀ ಸರ್ಕಾರ ಉತ್ತರ ಕರ್ನಾಟಕ ಜೊತೆಗೂ ಇದೆ ಎಂಬ ಭಾವನೆ ಮೂಡಬೇಕು ಎಂಬ ಉದ್ದೇಶದಿಂದ ಈ ಸೌಧ ನಿರ್ಮಿಸಲಾಗಿದೆ. ಆದರೆ, ಕೊಟ್ಟ ಮಾತಿನಂತೆ ಯಾವುದೇ ಸರ್ಕಾರ ನಡೆದುಕೊಳ್ಳಲಿಲ್ಲ. ಹೀಗಾಗಿ, ಅದು ಶಾವಿಗೆ ಒಣಗಿಸಲು ಬಳಕೆಯಾಗುತ್ತಿದೆ’ ಎಂಬ ವ್ಯಂಗ್ಯವವನ್ನೂ ಜನ ಹೊರಹಾಕಿದ್ದಾರೆ.
ಮಲ್ಲವ್ವ ಅವರು ಸುವರ್ಣ ವಿಧಾನಸೌಧದಲ್ಲಿ ಏಜೆನ್ಸಿ ಮೂಲಕ ದಿನಗೂಲಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಶಾವಿಗೆ ಖರೀದಿಸಿದ್ದ ಅವರು, ತಂಪಿನ ವಾತಾವರಣದಿಂದ ಅವು ಕೆಡಬಾರದು ಎಂದು ಸೌಧದ ಮೆಟ್ಟಿಲುಗಳ ಮೇಲೆ ಒಣಗಿಸಲು ಹಾಕಿದ್ದರು. ವಿಷಯದ ಗಂಭೀರತೆ ಅರಿಯದ ಮಲ್ಲವ್ವ ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾರೆ .
ಈ ಬಗ್ಗೆ ಮಾಹಿತಿ ನೀಡಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಲ್.ಭೀಮನಾಯ್ಕ, ‘ಈ ವಿಷಯ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ, ಒಣಗಿಸಲು ಹಾಕಿದ್ದ ಶಾವಿಗೆ ತೆಗೆದಿದ್ದೇವೆ. ಮಲ್ಲವ್ವ ಅವರನ್ನು ಕೆಲಸದಿಂದ ತೆಗೆದಿದ್ದೇವೆ ಎಂದಿದ್ದಾರೆ.