ಮಂಗಳೂರು : ಲಕ್ಷಗಟ್ಟಲೇ ವರದಕ್ಷಿಣೆ ನೀಡಿದ್ರೂ ಪತಿ ಕಿರುಕುಳ ನೀಡುತ್ತಿದ್ದಾನೆಂದು ಮಂಗಳೂರಿನಲ್ಲಿ ಮಹಿಳೆಯೊಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವರದಕ್ಷಿಣೆ ಕೊಟ್ಟದ್ದೇ ಅಲ್ಲದೆ ಕಾರು ಬೇಕು ಎಂದು ಪತಿ ಹಾಗೂ ಆತನ ಮನೆಯವರು ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯೋರ್ವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತುಷಾರ್ ಬಿ. ಮಾಣೈ ಎಂಬವರು ತಾನು ದುಬೈನಲ್ಲಿ ಹೋಟೆಲ್ ನಡೆಸುತ್ತಿದ್ದೇನೆ ಎಂದು ನಂಬಿಸಿ ಮದುವೆ ಆಗಿದ್ದರು. ಇದೀಗ ತುಷಾರ್ ಬಿ. ಮಾಣೈ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ.
ತುಷಾರ್ ಮದುವೆಯಾಗಿದ್ದು ಮದುವೆಯ ಎಲ್ಲಾ ಖರ್ಚುಗಳನ್ನು ವಧುವಿನ ಮನೆಯವರು ಭರಿಸಿದ್ದರು. ವರನ ಮನೆಯವರ ಬೇಡಿಕೆಯಂತೆ ಜಾಗ ಮಾರಿ ಸಾಲ ಮಾಡಿ 15 ಲಕ್ಷ ರೂ. ಗಳಿಗೂ ಅಧಿಕ ಹಣ ನೀಡಲಾಗಿತ್ತು. ಮದುವೆಯಾದ ಅನಂತರ ತುಷಾರ್ ಹಾಗೂ ಇತರರು ಸೇರಿ ಕಾರು ಖರೀದಿಸಲು 10 ಲಕ್ಷ ರೂ. ಹೆಚ್ಚುವರಿ ವರದಕ್ಷಿಣೆ ತರಬೇಕೆಂದು ಬಲವಂತ ಮಾಡಿ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ಇದಲ್ಲದೇ ಕಾರಿನ ಸಾಲದ ಜಾಮೀನಿಗೆ ಬಲವಂತವಾಗಿ ಸಹಿ ಪಡೆದುಕೊಂಡಿದ್ದಾರೆ ಮದ್ಯ ಸೇವಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.