ಉಡುಪಿ :ಪದೇ ಪದೇ ಪತಿ ಮಕ್ಕಳಿಗೆ ಮೊಬೈಲ್ ಕೊಡ್ತಾರೆ ಎಂಬ ಕ್ಷುಲಕ ಕಾರಣಕ್ಕೆ ಜಗಳವಾಗಿ ಮಹಿಳೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಬೈಂದೂರಿನಲ್ಲಿ ನಡೆದಿದೆ.
ಮುಂಬಯಿ ಹೊಟೇಲ್ ಕೆಲಸದಲ್ಲಿದ್ದ ವಿಜಯ್ ಶೆಟ್ಟಿ ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದಿದ್ದರು. ನಿನ್ನೆ ಮೊಬೈಲ್ ಪೋನ್ ನೋಡಲು ಕೊಟ್ಟ ವಿಚಾರವಾಗಿ ಪತ್ನಿ ಸುಶ್ಮಿತಾ ವಿಜಯ್ ಶೆಟ್ಟಿಯೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ವಿಜಯ್ ಶೆಟ್ಟಿ ತಾನು ಬೊಂಬಾಯಿಗೆ ಹೋಗುವುದಾಗಿ ಹೇಳಿ ಬ್ಯಾಗಿಗೆ ಬಟ್ಟೆಗಳನ್ನು ಹಾಕೋದಕ್ಕೆ ಮುಂದಾಗಿದ್ದಾರೆ. ಇದನ್ನು ನೋಡಿದ ಸುಶ್ಮಿತಾ ಮನೆಯ ಒಳಗಿನ ರೂಮಿನ ಕೋಣೆಗೆ ಹೋಗಿ ಬೆಳಿಗ್ಗೆ 11:30 ಗಂಟೆಗೆ ಬಾಗಿಲು ಹಾಕಿಕೊಂಡಿದ್ದಾರೆ.
ಸಂಶಯಗೊಂಡು ಕೋಣೆಯ ಕಿಟಕಿಯ ಗಾಜು ಒಡೆದು ನೋಡಿದಾಗ ಸುಶ್ಮಿತಾ ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು ಕಂಡಿದೆ. ಕೂಡಲೇ ಕೋಣೆಯ ಬಾಗಿಲು ಒಡೆದು ಸುಶ್ಮಿತಾರನ್ನು ನೇಣು ಕುಣಿಕೆಯಿಂದ ಕೆಳಗಿಳಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.