ಬೆಂಗಳೂರು : ಕೇಂದ್ರ ಸರ್ಕಾರದ ಅನ್ ಲಾಕ್ 3.0 ಮಾರ್ಗ ಸೂಚಿಯಂತೆ ರಾಜ್ಯ ಸರ್ಕಾರ ರಾತ್ರಿ ಕರ್ಪ್ಯೂ ಹಾಗೂ ಸಂಡೇ ಕರ್ಪ್ಯೂವನ್ನು ತೆರವುಗೊಳಿಸಿದೆ. ಹೀಗಾಗಿ ಭಾನುವಾರ ಮತ್ತು ರಾತ್ರಿ ಕರ್ಪ್ಯೂ ಹಿನ್ನಲೆಯಲ್ಲಿ ಬಂದ್ ಆಗಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಇದೀಗ ಮತ್ತೆ ಆಗಸ್ಟ್ 1, 2020ರ ನಾಳೆಯಿಂದ ಆರಂಭಗೊಳ್ಳಲಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ರಾಜ್ಯಾದ್ಯಂತ ಭಾನುವಾರಗಳಂದು ಜಾರಿಯಲ್ಲಿದ್ದ ಲಾಕ್ ಡೌನ್ ಹಾಗೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಧಿಸಿದ್ದ ಕರ್ಫ್ಯೂವನ್ನು ದಿನಾಂಕ01.08.2020 ರಿಂದ ಜಾರಿಗೆ ಬರುವಂತೆ ಘನ ಸರ್ಕಾರವು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ಸಾರಿಗೆಗಳನ್ನು ವಾರದ ಎಲ್ಲಾ ದಿನಗಳಂದು ಹಾಗೂ ರಾತ್ರಿ ಸಾರಿಗೆಗಳನ್ನು ಯಥಾಸ್ಥಿತಿ ಕಾರ್ಯಾಚರಣೆ ಮಾಡಲಾಗುವುದು ಎಂಬುದಾಗಿ ತಿಳಿಸಿದೆ.
ಹೀಗಾಗಿ ಭಾನುವಾರ ಹಾಗೂ ರಾತ್ರಿ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆಗಸ್ಟ್ 1ರ ನಾಳೆಯಿಂದ ಪುನರ್ ಆರಂಭಗೊಳ್ಳಲಿದೆ. ಈ ಮೂಲಕ ಭಾನುವಾರ, ರಾತ್ರಿ ಸಾರಿಗೆ ಬಸ್ ಪ್ರಯಾಣಿಕರಿಗೆ ಪ್ರಯಾಣಿಸಲು ಕೆ ಎಸ್ ಆರ್ ಟಿ ಸಿ ಬಸ್ ಲಭ್ಯವಾಗಲಿವೆ.