ಬೆಂಗಳೂರು : ಕಾಂತಾರ ಸಿನಿಮಾ ತನ್ನ ಯಶಸ್ಸಿನ ನಾಗಾಲೋಟ ಮುಂದುವರೆಸಿರುವಾಗಲೇ ಇಡೀ ಸಿನಿಮಾ ತಂಡಕ್ಕೆ ಬಹುದೊಡ್ಡ ಆಘಾತ ಎದುರಾಗಿದೆ. ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಬಳಸದಂತೆ ಕೇರಳದ ಪ್ರಧಾನ ಜಿಲ್ಲೆ ಮತ್ತು ಕೋಝಿಕ್ಕೋಡ್ ನ್ಯಾಯಾಧೀಶರು ಹಾಡಿಗೆ ತಡೆಯಾಜ್ಞೆ ನೀಡಿದ್ದಾರೆ. ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕ ಜೊತೆಗೆ Amazon, YouTube, Spotify, Wynk, ಸಂಗೀತ, ಜಿಯೋ ಸವನ್ ಮತ್ತು ಇತರರು ತೈಕ್ಕುಡಂ ಬ್ರಿಡ್ಜ್ ಅನುಮತಿ ಪಡೆಯದೇ ಹಾಡನ್ನು ಬಳಸುವಂತಿಲ್ಲ ಎಂದು ಹೇಳಿದೆ.
ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು ಚಿತ್ರತಂಡ ಎದುರಿಸಿತ್ತು. ಕಾಂತಾರಾ ಸಿನಿಮಾದ ವರಾಹ ರೂಪಂ ಎನ್ನುವ ಫೇಮಸ್ ಟ್ಯೂನ್ ಅನ್ನು 5 ವರ್ಷ ಹಳೆಯ ಮಲಯಾಳಂ ಸಿನಿಮಾದಿಂದ ಕದ್ದಿದ್ದಾರೆ ಎಂಬ ಮಾತು ಬಂದಿತ್ತು.
ಈ ಕುರಿತು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿದೆ. ಹೌದು, ಈ ವಿಚಾರವನ್ನು ‘ತೈಕ್ಕುಡಂ ಬ್ರಿಡ್ಜ್’ ತನ್ನ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಹಂಚಿಕೊಂಡಿದೆ.
‘ಕಾಂತಾರ’ ಚಿತ್ರ ಬಿಡುಗಡೆ ಆದ ಸಂದರ್ಭದಲ್ಲಿ ‘ವರಾಹ ರೂಪಂ..’ ಮತ್ತು ‘ನವರಸಂ..’ ಹಾಡಿನ ನಡುವೆ ತುಂಬಾ ಸಾಮ್ಯತೆ ಇರೋ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಹಾಗಾಗಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಆದರೆ ‘ಇದು ಕಾಪಿ ಅಲ್ಲ, ಕೇವಲ ಸ್ಫೂರ್ತಿ ಪಡೆದು ಮಾಡಿದ್ದು. ರಾಗಗಳು ಒಂದೇ ಆಗಿರುವ ಕಾರಣದಿಂದ ಸಾಮ್ಯತೆ ಸಹಜ’ ಎಂದು ಅಜನೀಶ್ ಬಿ. ಲೋಕನಾಥ್ ಅವರು ಸಮಜಾಯಿಷಿ ನೀಡಿದ್ದರು. ಇಷ್ಟು ದಿನ ಸುಮ್ಮನಿದ್ದ ‘ತೈಕ್ಕುಡಂ ಬ್ರಿಡ್ಜ್’ ತಂಡದವರು ಈಗ ಕೇಸ್ ಹಾಕಲು ನಿರ್ಧರಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿದೆ