ಉಡುಪಿ; ಅಂತರ್ ರಾಜ್ಯ ಸರ ಕಳ್ಳನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ದಾಂಡೇಲಿ ಪಟೇಲ್ ನಗರದ ನಿವಾಸಿ ಮೌಲಾಲಿ ಜಮಾದಾರ್ ಬಂಧಿತ ಆರೋಪಿ.
ಆರೋಪಿ ಅ.3ರಂದು ಕುಂಜಿಬೆಟ್ಟು ನಿವಾಸಿ ಪ್ರೇಮಾ ಶೇಣವ ಎಂಬವರು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಚಂಡಿಕಾಯಾಗದಲ್ಲಿ ಪಾಲ್ಗೊಂಡು ವಾಪಾಸು ಮನೆಗೆ ಹೋಗುತ್ತಿದ್ದ ವೇಳೆ ಎಂಜಿಎಂ ಕಾಲೇಜಿನ ಮೈದಾನದ ಬಳಿ ಆರೋಪಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿದ್ದನು ಎನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಲಭ್ಯ ಸಿಸಿಟಿವಿ ಫೂಟೇಜ್ಗಳು ಹಾಗೂ ಮೊಬೈಲ್ ಕರೆ ವಿವರಗಳನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನದ ಸರವನ್ನು ಧಾರವಾಡದ ಟೋಲ್ ನಾಕಾದ ಗೋಲ್ಡ್ ಶಾಪ್ವೊಂದರಲ್ಲಿ ಮಾರಾಟ ಮಾಡಿರುವುದು ಬಯಲಾಗಿದೆ.
ಇದೇ ವೇಳೆ ಆರೋಪಿ, 2021ರ ಅ.2ರಂದು ಕಡಿಯಾಳಿಯಲ್ಲಿ ವೈದ್ಯರಾದ ಡಾ.ಪ್ರಜ್ಞಾ ಕೆ.ಶ್ರೀಕಾಂತ್ ಅವರ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಆರೋಪಿ ಧಾರವಾಡದಲ್ಲಿ ಮಾರಾಟ ಮಾಡಿದ್ದ ಅಂದಾಜು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೌಲಾಲಿ ಜಮಾದಾರ್ನ ವಿರುದ್ಧ ದಾಂಡೇಲಿ ಗ್ರಾಮಾಂತರ ಠಾಣೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆ, ಧಾರವಾಡ ನಗರದ ಅಳ್ನಾವರ ಪೊಲೀಸ್ ಠಾಣೆ ಹಾಗೂ ಗೋವಾ ರಾಜ್ಯದ ಮಡಗಾಂವ್ ಮತ್ತು ಪೋಂಡಾ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿ ಬಂಧನಕ್ಕೆ ಒಳಗಾಗಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದನು. ಉಡುಪಿ ನಗರ ಠಾಣೆಯ ಪ್ರಕರಣದಲ್ಲಿ ಬಂಧಿತನಾಗಿ ಪ್ರಸ್ತುತ ನ್ಯಾಯಾಂಗ ಬಂಧನ ದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.