ಮಂಗಳೂರು: ಕೋಟೆಕಾರು ವ್ಯ.ಸೇ.ಸ.ಬ್ಯಾಂಕ್ನ ಕೆ.ಸಿ.ರೋಡ್ ಶಾಖೆಯ ದರೋಡೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 18 ಕೆ.ಜಿ. ಚಿನ್ನಾಭರಣವನ್ನು ವಶಪಡಿಸಿಕೊಂಡ ಪೊಲೀಸರು ರವಿವಾರ ನಗರಕ್ಕೆ ಆಗಮಿಸಲಿದ್ದಾರೆ.
ಮಂಗಳೂರು ಪೊಲೀಸರ ತಂಡ ತಮಿಳುನಾಡಿನಲ್ಲಿ ಬಂಧಿಸಿರುವ ನಾಲ್ಕನೇ ಆರೋಪಿ ಹಾಗೂ ಅವನಿಂದ 18 ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ದರೋಡೆಯ ಕಿಂಗ್ಪಿನ್ ಮುರುಗೆಂಡಿ ಥೇವರ್ಗೆ ಸಹಕರಿಸಿದ ಅವನ ತಂದೆ ಷಣ್ಮುಗ ಸುಂದರಂ (65)ನನ್ನು ಶುಕ್ರವಾರ ತಿರುನಲ್ವೇಲಿ ಯಲ್ಲಿ ಬಂಧಿಸಲಾಗಿದ್ದು, ಈ ವೇಳೆ ಆತ ಅಡಗಿಸಿಟ್ಟಿದ್ದ ಪೂರ್ಣ ಚಿನ್ನಾಭರಣಗಳು ಪತ್ತೆಯಾಗಿತ್ತು. ಪೊಲೀಸರು ಅದರ ಮಹಜರು ಮಾಡಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಟ್ರಾನ್ಸಿಟ್ ವಾರಂಟ್ ಪಡೆದು ಶನಿವಾರ ಮಂಗಳೂರಿನತ್ತ ಹೊರಟಿದ್ದಾರೆ.
ರವಿವಾರ ಆತನನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ರಜೆ ಇರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮನೆಯಲ್ಲಿ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.