ಮಂಡ್ಯ: ದೇಶ, ವಿದೇಶ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಭವಿಷ್ಯ ನುಡಿದು ಪ್ರಸಿದ್ಧಿ ಪಡೆದಿರುವ ಕೋಡಿಮಠದ ಶ್ರೀಗಳು ಇಂದು ಮತ್ತಷ್ಟು ಭಯಾನಕ ಭವಿಷ್ಯ ನುಡಿದಿದ್ದಾರೆ.
ಮಳೆ ಬಗ್ಗೆ ಭವಿಷ್ಯ ನುಡಿದಿರುವ ಅವರು ‘ಮಳೆ ಅನಾಹುತ ಇನ್ನೂ ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ. ಸುನಾಮಿ ಸಹ ಬರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ. ಇದೇ ವೇಳೆ ನೀರು ನೀರು ಎಂದು ಈಗ ನೀರೇ ಬೇಡ ಎನ್ನುವ ಹಾಗೆ ಜನರು ಮಾತನಾಡುತ್ತಿದ್ದಾರೆ, ಆದರೆ ಇನ್ನು ಕೆಲವೇ ವರ್ಷಗಳಲ್ಲಿ ನೀರಿಗಾಗಿ ಹಾಹಾಕಾರ ಪಡುವ ದಿನಗಳೂ ಬರುತ್ತವೆ ಎಂದಿದ್ದಾರೆ.
ಭೂಮಿಯಿಂದ ಹೊಸ ಹೊಸ ವಿಷಜಂತುಗಳು ಉದ್ಭವಿಸಲಿವೆ. ಜನರು ಮನೆಯಿಂದ ಹೊರಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ ಎಂದು ಕೋಡಿಶ್ರೀ ಹೇಳಿದ್ದಾರೆ. ಕೊರೊನಾದ ಬಗ್ಗೆ ಈ ಹಿಂದೆ ನಾನು ಹೇಳಿದ್ದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ. ಎಲ್ಲಾ ಮಾತುಗಳು ನಿಜವಾಗಿವೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ. ಕೊರೊನಾ ಇನ್ನೊಂದು ವರ್ಷದಲ್ಲಿ ಹೋಗುತ್ತದೆ, ಆದರೆ ಹೋಗುವ ಮೊದಲು ವಿಪರೀತ ಕಷ್ಟಗಳನ್ನು ಕೊಟ್ಟು ಹೋಗಲಿದೆ’ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ ಶ್ರೀಗಳು. ಅದೇನೆಂದರೆ, ದೇವರನ್ನು ಪೂಜಿಸಬೇಕು ಎನ್ನುವುದು. ‘ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿದೆ. ಯೋಗ್ಯ ಸಾಧುಗಳಿದ್ದಾರೆ, ಗದ್ದುಗೆಗಳಿವೆ. ಎಲ್ಲರೂ ಸೇರಿ ಪ್ರಾರ್ಥಿಸಿದರೆ ಶೇ.10ರಷ್ಟು ಪರಿಹಾರ ಸಿಗಲಿದೆ’ ಎಂದು ಕೋಡಿಶ್ರೀ ಹೇಳಿದ್ದಾರೆ.
ಇನ್ನು ಮುರುಘಾಮಠದ ಸ್ವಾಮೀಜಿ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆಯೂ ಶ್ರೀಗಳು ಮಾತನಾಡಿ, ಮಾರ್ಮಿಕವಾಗಿ ಉತ್ತರಿಸಿದ್ದಾರೆ. ‘ನೀಚಂಗೆ ದೊರೆತನುವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನವೂ ಸಿಕ್ಕಿರುವುದು ಈ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಆರೋಪಗಳು ಮುಂದೆ ಮತ್ತಷ್ಟು ಹೆಚ್ಚಾಗಲಿದೆ’ ಎಂದಿರುವ ಕೋಡಿಶ್ರೀ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತ್ರ ಮಾತನಾಡಲು ನಿರಾಕರಿಸಿದ್ದಾರೆ