ಹಾಸನ : ಪದೇ ಪದೇ ಸುದ್ದಿಗೆ ಆಹಾರವಾಗುತ್ತಿರುವ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಅವರು ಕೊರೊನಾ ಕುರಿತಾಗಿ ಹೇಳಿರುವ ಭವಿಷ್ಯದಿಂದಾಗಿ. ಕೊರೋನಾ ಸಂಕಷ್ಟ ಸದ್ಯಕ್ಕೆ ಕಡಿಮೆ ಆಗೋದಿಲ್ಲ. ಕೊರೋನಾ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷಗಳ ಕಾಲ ಬೇಕಾಗುತ್ತದೆ. ಇದೀಗ ಬ್ರಿಟನ್ ವೈರಸ್, ಕೊರೋನಾ ವೈರಸ್ ರೂಪಾಂತರ ಅಂತಾರಲ್ಲ, ಅದರ ಬಗ್ಗೆ ಎರಡು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂಬುದಾಗಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಹೊಸ ವರ್ಷದಲ್ಲಿ ಬರುತ್ತಿರುವಂತ ಗ್ರಹಣಗಳೇ ಬದಲಾವಣೆಯ ಸಂಕೇತಗಳಾಗಿವೆ. ರಾಜ್ಯದಲ್ಲಿ ಪುನಹ ಅಕಾಲಿಕ ಮಳೆ, ಜಲಸಂಬಂಧಿ ಅನಾಹುತಗಳಾಗುವ ಸಾಧ್ಯತೆಗಳಿವೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು, ರಾಜ್ಯ ರಾಜಕಾರಣದಲ್ಲಿ ಶೀಘ್ರವೇ ಧ್ರುವೀಕರಣ ಸಂಭವಿಸಲಿದೆ. ಸಾಕಷ್ಟು ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿದೆ. ಇದು ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿರದೇ, ದೇಶ, ಜಾಗತಿಗ ಮಟ್ಟದಲ್ಲೂ ಬದಲಾವಣೆಯಾಗಲಿದೆ ಎಂದಿದ್ದಾರೆ.