ನವದೆಹಲಿ: ಚಂಡೀಗಢ ಬಿಜೆಪಿ ಸಂಸದೆ ಕಿರಣ್ ಖೇರ್ಗೆ ರಕ್ತದ ಕ್ಯಾನ್ಸರ್ ಇರುವ ಕುರಿತು ಅವರ ಪತಿ ಅನುಪಮ್ ಖೇರ್ ಮಾಹಿತಿ ನೀಡಿದ್ದಾರೆ.
ಟ್ವಿಟ್ಟರ್ನಲ್ಲಿ ಈ ಕುರಿತು ತಿಳಿಸಿರುವ ನಟ ಅನುಪಮ್ ಖೇರ್, ಪತ್ನಿಗೆ ರಕ್ತದ ಕ್ಯಾನ್ಸರ್ ಇರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ. ಕಳೆದ ವರ್ಷ ನವೆಂಬರ್ 11ರಂದು ಅವರ ಎಡಕಾಲು ಮೂಳೆ ಮುರಿದಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ನಂತರ ಅವರಿಗೆ ಅಪರೂಪದ ಬ್ಲಡ್ ಕ್ಯಾನ್ಸರ್(myeloma) ಇರುವುದು ತಿಳಿದುಬಂದಿತ್ತು. ಸಧ್ಯ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ರೋಗವು ಬಳಿಕ ಬಲಗಾಲು, ಕೈಗಳಿಗೂ ಹರಡುತ್ತಿತ್ತು. ಹೀಗಾಗಿ ಡಿಸೆಂಬರ್ 4 ರಂದು ಮುಂಬೈಗೆ ಚಿಕಿತ್ಸೆಗೆಂದು ತೆರಳಿದ್ದರು. ನಾಲ್ಕು ತಿಂಗಳ ಚಿಕಿತ್ಸೆ ಬಳಿಕ ಇದೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿರಿಸುವುದಿಲ್ಲ, ಆಗಾಗ ಆಸ್ಪತ್ರೆಗೆ ಬಂದುಹೋಗಬೇಕಾಗುತ್ತದೆ ಎಂದಿದ್ದಾರೆ.
ವೈದ್ಯರ ಸಲಹೆಯಂತೆ ಈಗಾಗಲೇ ಸೂಕ್ತ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಅವಳು ಹೋರಾಟಗಾರ್ತಿಯಾಗಿದ್ದು, ಮೊದಲಿಗಿಂತಲೂ ಹೆಚ್ಚು ಗಟ್ಟಿಯಾಗಿ ಹೊರಬರುತ್ತಾಳೆ ಎನ್ನುವ ನಂಬಿಕೆ ಇದೆ. ಆಕೆ ಸಾಕಷ್ಟು ಜನರ ಪ್ರೀತಿ ಪಾತ್ರಳಾಗಿದ್ದು, ನಿಮ್ಮ ಪ್ರೀತಿಯಿಂದಲೇ ಆಕೆ ಗುಣಮುಖಳಾಗುತ್ತಾಳೆ, ಹೀಗೆಯೇ ನಿಮ್ಮ ಪ್ರೀತಿ ತೋರಿಸುತ್ತಿರಿ, ಆಕೆ ಚೇತರಿಕೆಯ ಹಾದಿಯಲ್ಲಿದ್ದು, ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಚಿರ ಋಣಿಯಾಗಿದ್ದೇನೆ ಎಂದು ಬರೆದಿದ್ದಾರೆ.

ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಬಿಜೆಪಿ ನಾಯಕಿ ಕಿರಣ್ ನಾಪತ್ತೆಯಾಗಿದ್ದಾರೆ, ಕಾಣೆಯಾಗಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಆಕೆ ಮಲ್ಟಿಪಲ್ ಮೈಲೋಮಾದಿಂದ ಬಳಲುತ್ತಿದ್ದು ಮುಂಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಚಂಡೀಗಢದ ಬಿಜೆಪಿ ಮುಖ್ಯಸ್ಥ ಅರುಣ್ ಸೂದ್ ಹೇಳಿಕೆ ನೀಡಿದ ಬೆನ್ನಲ್ಲೇ ಅನುಪಮ್ ಖೇರ್ ಮತ್ತು ಅವರ ಪುತ್ರ ಈ ವಿಷಯ ಬಹಿರಂಗಪಡಿಸಿದ್ದಾರೆ.