ಬೆಳ್ತಂಗಡಿ : ಬೃಹತ್ ಕಾಳಿಂಗ ಸರ್ಪವೊಂದು ಹೆಬ್ಬಾವನ್ನು ನುಂಗಿದ ಘಟನೆ ಬೆಳ್ತಂಗಡಿಯ ಪಿಲ್ಯದಲ್ಲಿ ಇಂದು ಸಂಜೆ ನಡೆದಿದೆ.ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಪಿಲ್ಯದ ಸಾರ್ವಜನಿಕ ಸ್ಥಳದಲ್ಲಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಸುಮಾರು 9 ಅಡಿ ಉದ್ದದ ಹೆಬ್ಬಾವನ್ನು ನುಂಗಿದೆ. ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ವೇಣೂರು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಸುರೇಶ್ ಗೌಡರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಅವರು ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಹಾವು ಬೃಹತ್ ಗಾತ್ರದ್ದಾಗದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಉರಗ ತಜ್ಞ ಬೆಳ್ತಂಗಡಿಯ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದಾರೆ.
ಹೆಬ್ಬಾವನ್ನು ನುಂಗಿದ ಕಾಳಿಂಗ ಸರ್ಪ ನಂತರ ಹೆಬ್ಬಾವನ್ನು ತನ್ನ ಹೊಟ್ಟೆಯಿಂದ ಹೊರಹಾಕಿದೆ. ಬಳಿಕ ಕಾಳಿಂಗ ಸರ್ಪವನ್ನು ಸ್ನೇಕ್ ಅಶೋಕ್ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು ಸುರಕ್ಷಿತಾಗಿ ಕಾಡಿಗೆ ಬಿಡಲಾಗಿದೆ. ಕಾಳಿಂಗ ಸರ್ಪದ ದಾಳಿಗೆ ತುತ್ತಾದ ಹೆಬ್ಬಾವು ಪ್ರಾಣ ಬಿಟ್ಟಿದ್ದು ಅರಣ್ಯ ಇಲಾಖೆಯವರು ಮಣ್ಣು ಮಾಡಿದ್ದಾರೆ.