ಸುಳ್ಯ: ಸುಳ್ಯ ತಾಲೂಕು ಮತ್ತು ಪುತ್ತೂರು ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಅರಣ್ಯ ಅಭಿವೃದ್ಧಿ ನಿಗಮ (ಕೆ.ಎಫ್. ಡಿ.ಸಿ.) ಯಲ್ಲಿ ಹತ್ತಾರು ವರ್ಷ ಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸಿದ್ದ ಕಚೇರಿ ಸಿಬ್ಬಂದಿ ಹಾಗೂ ಕ್ಷೇತ್ರ ಸಿಬ್ಬಂದಿಗಳಲ್ಲಿ ಶೇಕಡಾ ಅರುವತ್ತು ಮಂದಿಯನ್ನು ಪೂರ್ವ ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ಕೈ ಬಿಟ್ಟಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಜೆ.ಡಿ.ಎಸ್.ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವರು ತಿಳಿಸಿದ್ದಾರೆ.
1969 ರಲ್ಲಿ ಶಾಸ್ತ್ರಿ – ಸಿರಿಮಾವೋ ಒಪ್ಪಂದದ ಪ್ರಕಾರ ಸಿಂಹಳದ ನಿರಾಶ್ರಿತರಿಗಾಗಿ ಸುಳ್ಯ ಮತ್ತು ಪುತ್ತೂರಲ್ಲಿ 4400 ಹೆಕ್ಟೇರ್ ಭೂಮಿಯಲ್ಲಿ ರಬ್ಬರ್ ಬೆಳೆಯಲಾಗಿದೆ.1200 ಕಾರ್ಮಿಕರ ಮತ್ತು 360 ಕ್ಷೇತ್ರ ಹಾಗೂ ಕಚೇರಿ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಇದೀಗ ಈ 360 ಮಂದಿ ಸಿಬ್ಬಂದಿಗಳಲ್ಲಿ ಶೇ. 60 ಮಂದಿ ಸಿಬ್ಬಂದಿಗಳನ್ನು ಏಕಾಏಕಿ ಕೆಲಸ ದಿಂದ ಕೈಬಿಡಲಾಗಿದೆ.
ತೋಟದ ಮೇಸ್ತ್ರಿಗಳನ್ನು ಹಿಂಬಡ್ತಿ ನೀಡಿ ಮೂರ್ತೆ ಕೆಲಸಕ್ಕೆ ನಿಯೋಜಿಸ ಲಾಗಿದೆ.ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ, ಬಿಪಿಎಲ್ ಕಾರ್ಡ್ ಇಲ್ಲದ, ಬೇರೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ವಯೋಮಿತಿ ಮೀರಿದ, ಹದಿ ನೈದು ವರ್ಷಕ್ಕೂ ಹೆಚ್ಚು ಕಾಲ ಕನಿಷ್ಠ ಸಂಬಳದಲ್ಲಿ ದುಡಿದ 150 ಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಗುರಿಯಾಗಿವೆ.
ಇವರಿಗೆ ಕನಿಷ್ಠ ಮುನ್ಸೂಚನೆಯ ನ್ನೂ ನೀಡದೆ, ಕಾರ್ಮಿಕ ನ್ಯಾಯವನ್ನೂ ಪಾಲಿಸದೆ, ವೈಜ್ಞಾನಿಕ ಮಾನದಂಡ – ಹಿರಿತನಗಳನ್ನು ಪರಿಗಣಿಸದೆ, ನೆಲದ ನ್ಯಾಯವನ್ನು ಕಡೆಗಣಿಸಿದ ಆಡಳಿತದ ನಿರ್ಧಾರವನ್ನು ಖಂಡಿಸುತ್ತೇನೆ. ಅದಕ್ಷ ಆಡಳಿತ, ಅಸಮರ್ಥ ಭ್ರಷ್ಟ ರಾಜಕಾರಣಿಯ ನೇತೃತ್ವದ ಆಡಳಿತ ಮಂಡಳಿಯ ಅಪಕ್ವ ನಿರ್ಧಾರಗಳಿಗೆ ಬಡ ಸಿಬ್ಬಂದಿ ಬಲಿಯಾಗಿದ್ದಾರೆ’ ಎಂದು ಎಂದು ಎಂ.ಬಿ. ಸದಾಶಿವ ಟೀಕಿಸಿದ್ದಾರೆ.