ಚಾಮರಾಜನಗರ: ರಾಜ್ಯದಲ್ಲಿ ಬಡವರ ಬದುಕಿಗೆ ಕೊಳ್ಳಿ ಇಟ್ಟಿದ್ದ ಲಾಟರಿ ನಿಷೇಧಿಸಿ 15 ವರ್ಷಗಳೇ ಕಳೆದಿವೆ. ಆದರೆ ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂಬಂತೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೇರಳ ರಾಜ್ಯದ ಲಾಟರಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಹೊರ ರಾಜ್ಯದ ಲಾಟರಿ ಆಮಿಷಕ್ಕೆ ಬಲಿ ಬೀಳುತ್ತಿರುವ ಬಡವರು, ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗುತ್ತಿದೆ..
ಬಡಬಗ್ಗರು, ಕೂಲಿ ಕಾರ್ಮಿಕರು ಬೆವರು ಸುರಿಸಿ ದುಡಿದ ಹಣವನ್ನೆಲ್ಲಾ ಲಾಟರಿಗೆ ಸುರಿದು ಜೀವನ ಹಾಳುಮಾಡಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ 2007 ರಲ್ಲಿ ಅಂದಿನ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದಲ್ಲಿ ಲಾಟರಿ ನಿಷೇಧಿಸಿತ್ತು. ರಾಜ್ಯದಲ್ಲಿ ಲಾಟರಿ ನಿಷೇಧವಷ್ಟೇ ಅಲ್ಲ ಹೊರ ರಾಜ್ಯ ಗಳ ಮಾರಾಟವನ್ನು ನಿರ್ಬಂಧಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹೊರ ರಾಜ್ಯ ಗಳ ಲಾಟರಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಬಸ್ ಗಳಲ್ಲಿ ಕೇರಳಕ್ಕೆ ಹೋಗುವ ದಂಧೆಕೋರರು ಅಲ್ಲಿನ ಲಾಟರಿಗಳನ್ಮು ತಂದು ಕಾಡಂಚಿನ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಲಾಟರಿ ಆಸೆಗೆ ಬಲಿ ಬಿದ್ದು ಬಡಜನರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.
ಸೆನ್ ಹಾಗು ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು ಇತ್ತೀಚನ ದಿನಗಳಲ್ಲಿ ಹೊರ ರಾಜ್ಯಗಳ ಲಾಟರಿ ದಂಧೆ ಪತ್ತೆ ಹಚ್ಚಿ 12 ಪ್ರಕರಣ ದಾಖಲಿಸಿಕೊಂಡು ಹಲವರನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಲಾಟರಿ ಟಿಕೇಟ್ ವಶಪಡಿಸಿಕೊಂಡಿದ್ದಾರೆ. ಮಲೆಮಹದೇಶ್ವರಬೆಟ್ಟ, ಕೊಳ್ಳೇಗಾಲ ಗುಂಡ್ಲುಪೇಟೆ ಸೇರಿದಂತೆ ಗಡಿಯಂಚಿನ ಗ್ರಾಮಗಳಲ್ಲಿ ಕೇರಳ ರಾಜ್ಯ ದ ಲಾಟರಿಗಳನ್ನು ಕದ್ದು ಮುಚ್ಚಿ ಮಾರಾಟ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಈ ಲಾಟರಿ ದಂಧೆ ವಿರುದ್ದ ತೀವ್ರ ನಿಗಾ ವಹಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ..
12 ಪ್ರಕರಣ ದಾಖಲಾಗಿದ್ದರೂ ಕೇರಳ ಲಾಟರಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ, ಕೇರಳದಿಂದ ನಿತ್ಯ ಚಾಮರಾಜನಗರ ಜಿಲ್ಲೆಗೆ ಬರುವವರ ಮೇಲೆ ನಿಗಾ ವಹಿಸಬೇಕು, ಲಾಟರಿ ದಂಧೆಯಲ್ಲಿ ತೊಡಗಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಬಂಧಿಸಬೇಕು, ಆ ಮೂಲಕ ಗಡಿಯಂಚಿನ ಜನರ ಬದುಕಿಗೆ ಮಾರಕವಾಗಿರುವ ಹೊರ ರಾಜ್ಯಗಳ ಲಾಟರಿ ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ…