ಮಂಗಳೂರು: ಹೊರವಲಯದ ಗುರುಪುರದಲ್ಲಿ ಇಂದು ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಕಂಬಳ ಕ್ಷೇತ್ರದ ಸಾಧಕ, ಕಂಬಳದ ಕೋಣಗಳ ಯಜಮಾನರ ಪೈಕಿ ಬಹಳ ಹಿರಿಯರಾಗಿದ್ದ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ (75) ಅವರು ನಿಧನ ಹೊಂದಿದ್ದಾರೆ.

ಗುರುವಪ್ಪ ಪೂಜಾರಿ ಅವರು ಸ್ಕೂಟರ್ ನಲ್ಲಿ ಗುರುಪುರದ ಕಡೆ ಹೋಗುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಕಂಬಳ ಕ್ಷೇತ್ರದಲ್ಲಿ ಅಪಾರವಾದ ಸಾಧನೆಯನ್ನು ಮಾಡಿದ್ದ ಕೀರ್ತಿ ಕೆದುಬರಿ ಗುರುವಪ್ಪ ಪೂಜಾರಿ ಅವರು, ಕಂಬಳ ಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕಳೆದ ಹಲವು ವರ್ಷಗಳಿಂದ ಅಡ್ಡ ಹಲಗೆ , ಕಣೆ ಹಲಗೆ, ವಿಭಾಗದಲ್ಲಿ ಕೋಣಗಳನ್ನು ಸ್ಪರ್ಧೆಗೆ ಇಳಿಸುತ್ತಿದ್ದರೂ, ಕೋಣಗಳ ಸ್ಪರ್ಧೆಯಲ್ಲಿ ಯಾವತ್ತೂ ತನಗೆ ಬಹುಮಾನ ಬರಬೇಕೆಂದು ಬಯಸಿದವರಲ್ಲ. ಇವರು ಕಂಬಳದಲ್ಲಿ ತನ್ನ ಉತ್ತಮ ವ್ಯಕ್ತಿತ್ವ, ಗುಣಗಳಿಂದಲೇ ಗುರುತಿಸಿಕೊಂಡಿದ್ದರು. ಅವರ ನಿಧನ ಸುದ್ದಿ ತಿಳಿದು ಅಪಾರ ಕಂಬಳಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕಂಬಳ ಸಮಿತಿ ಸಂತಾಪ ಸೂಚಿಸಿದೆ.


