ಮಂಗಳೂರು: ನಗರದಲ್ಲಿ ಇದೇ 29ರಂದು ಕಥಾ ಬಿಂದು ಪ್ರಕಾಶನದಿಂದ ಹಮ್ಮಿಕೊಂಡಿರುವ ಪ್ರಕಾಶನದ 50 ಕೃತಿಗಳ ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವು ಪುರಭವನದಲ್ಲಿ ನಡೆಯಲಿದೆ ಎಂದು ಪಿ.ವಿ. ಪ್ರದೀಪ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬುಧವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಡೆಯಲಿರುವ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಬೆಳಿಗ್ಗೆ 10 ಗಂಟೆಗೆ ಶೋಭಾಯಾತ್ರೆ ನಡೆಯಲಿದ್ದು ನಂತರ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಧ್ವಜಾರೋಹಣ ಆಗಲಿದೆ. 11 ಗಂಟೆಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಅರಣ್ಯಾಧಿಕಾರಿ ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸುವರು. ಮಧ್ಯಾಹ್ನ 12.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಮಧ್ಯಾಹ್ನ 1 ಗಂಟೆಗೆ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದು ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲ್ಲೂಕು ಘಟಕದ ಕೋಶಾಧಿಕಾರಿ ಸುಬ್ರಾಯ ಭಟ್ ಅತಿಥಿಯಾಗಿ ಪಾಲ್ಗೊಳ್ಳುವರು. ಹಾಗೂ ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮವು ನಡೆಯುತ್ತದೆ ಎಂದು ತಿಳಿಸಿದರು.
ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖಂಡ ಕೃಷ್ಣ ಜೆ. ಪಾಲೇಮಾ ಚೈತನ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಪಾಣೆಮಂಗಳೂರು ರೈತಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸಿತ್ತಾಯ, ಉದ್ಯಮಿ ಶ್ರೀಪತಿ ಭಟ್, ಶ್ರೀ ನಾರಾಯಣ ಗುರು ಚಾರಿಟಬಲ್ ಟ್ರಸ್ಟ್ನ ರಮೇಶ್ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜೆ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹಾಗೂ ಹೊಸ ಅಂಗಣ ಸಂಪಾದಕ ಹರಿಶ್ಚಂದ್ರ ಸಾಲಿಯಾನ್ ಭಾಗವಹಿಸುವರು ಎಂದು ತಿಳಿಸಿದರು.
ಹರಿಕೃಷ್ಣ ಪುನರೂರು, ಕೊಳ್ಳಪ್ಪ ಗೋವಿಂದ ಭಟ್, ಜಯಾನಂದ ಪೆರಾಜೆ ಮತ್ತಿತರರು ಇದ್ದರು.


