ಕಾಸರಗೋಡು, ಜೂ.16: ಗಲ್ಫ್ ದೇಶದಿಂದ ಆಗಮಿಸಿ ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕಾಸರಗೋಡಿನ ಉದುಮದಲ್ಲಿ ನಡೆದಿದೆ.
ಉದುಮ ಸೌತ್ ಕರಿಪ್ಪೊಡಿ ನಿವಾಸಿ ಅಬ್ದುಲ್ ರೆಹಮಾನ್(54) ಮೃತಪಟ್ಟವರು.
ಗಲ್ಫ್ ಉದ್ಯೋಗಿಯಾಗಿದ್ದ ಅಬ್ದುಲ್ ರೆಹಮಾನ್ ಹಾಗೂ ಅವರ ಪುತ್ರ ಜಿಶಾದ್ ಶನಿವಾರ ಬೆಳಗ್ಗೆ ಊರಿಗೆ ಬಂದಿದ್ದು, ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. ವಿದೇಶದಿಂದ ಆಗಮಿಸಿರುವ ಹಿನ್ನೆಲೆಯಲ್ಲಿ ಕೋವಿಡ್-19 ಪರೀಕ್ಷೆಗಾಗಿ ಉದುಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸೋಮವಾರ( ಜೂ.15) ಬೆಳಗ್ಗೆ ಅಬ್ದುರ್ರಹ್ಮಾನ್ ಹಾಗೂ ಜಿಶಾದ್ ರ ಗಂಟಲದ್ರವ ತೆಗೆದಿದ್ದು, ತಪಾಸಣೆಗೆ ಕಳುಹಿಸಿದ್ದಾರೆ.
ಸೋಮವಾರ ಸಂಜೆಯ ವೇಳೆ ಅಬ್ದುರ್ರಹ್ಮಾನ್ ಅವರಲ್ಲಿ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ ಅವರು ಕೊನೆಯುಸಿರೆಳದಿದ್ದಾರೆ.
ಅವರ ಗಂಟಲದ್ರವದ ವೈದ್ಯಕೀಯ ಪರೀಕ್ಷಾ ವರದಿ ಇಂದು ಲಭಿಸಲಿದೆ.