ಬೆಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಸುಮಾರು 14 ಜಿಕಾ ವೈರಸ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ , ಇತ್ತ ಕರ್ನಾಟಕದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ . ರಾಜ್ಯದಲ್ಲಿ ರೋಗ ಹರಡುವುದನ್ನು ತಡೆಯುವ ಸಲುವಾಗಿ ಕರ್ನಾಟಕ ಸರ್ಕಾರ ಶುಕ್ರವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕೇರಳದ ಗಡಿಯಲ್ಲಿರುವ ಜಿಲ್ಲೆಗಳಿಗೆ ಜಾಗರೂಕರಾಗಿರಲು ನಿರ್ದೇಶಿಸಲಾಗಿದೆ.
ಸೊಳ್ಳೆಗಳಿಂದ ಹರಡುವ ಸೋಂಕು ಇದಾಗಿದ್ದು, ಸೊಳ್ಳೆಗಳ ಸಂತತಿ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ತಿಳಿಸಿದೆ. ರಾಜ್ಯದುದ್ದಕ್ಕೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಯುದ್ಧೋಪಾದಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಜಿಕಾ ವೈರಸ್ ಕಾಯಿಲೆಗೆ ವಾಹಕವಾಗಿರುವ ಈಡೆಸ್ ಸೊಳ್ಳೆ ಸೃಷ್ಟಿಯಾಗದಂತೆ ತಡೆಯಲು, ಘನ ತ್ಯಾಜ್ಯಗಳ ವಿಲೇವಾರಿ ಮಾಡಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಮೈಮೇಲೆ ಕೆಂಪು ರಾಶಸ್, ಜ್ವರ, ಗಂಟಲು ನೋವಿನ ಲಕ್ಷಣಗಳಿರುತ್ತವೆ. ಇಂತಹ ಲಕ್ಷಣಗಳಿದ್ದವರ ರಕ್ತದ ಮಾದರಿಯನ್ನು ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಯೂನಿಟ್ಗೆ ಕಳಿಸಬೇಕು. ಗರ್ಭಿಣಿಯರ ಅಲ್ಟ್ರಾಸೌಂಡ್ ಮಾಡುವಾಗ ಮೈಕ್ರೊಸೆಫಾಲಿ (ಮಗುವಿನ ತಲೆಯ ಬೆಳವಣಿಗೆಯಲ್ಲಿ ವ್ಯತ್ಯಾಸ) ಇರುವ ಬಗ್ಗೆ ಗಮನಹರಿಸಬೇಕು.
ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತೀ ವಾರ ಜನಿಸುವ ಎಲ್ಲಾ ಶಿಶುಗಳ ವಿವರ ಪಡೆಯಬೇಕು, ಯಾವುದೇ ಮಗುವಿನಲ್ಲಿ ಮೈಕ್ರೊಸೆಫಾಲಿ ಕಂಡುಬಂದರೆ ಕೂಡಲೇ ತಾಯಿ ಮತ್ತು ಮಗು ಇಬ್ಬರ ರಕ್ತದ ಮಾದರಿಯನ್ನು ಎನ್ಐವಿಗೆ ಗೆ ಕಳಿಸಬೇಕೆಂದು ಆದೇಶಿಸಲಾಗಿದೆ.
ಜಿಕಾ ವೈರಸ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರಕರಣಗಳ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಲು ಆರು ಸದಸ್ಯರ ಕೇಂದ್ರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕೇರಳದಲ್ಲಿ ಹೆಚ್ಚಿದ ಝಿಕಾ ವೈರಸ್: ಮಾರ್ಗಸೂಚಿ ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ
- Advertisement -
- Advertisement -
- Advertisement -