ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಾಲಯಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಇಂದು ಭೇಟಿ ಕೊಟ್ಟಿದ್ದಾರೆ. ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ದೇಗುಲದ ಕಾಮಗಾರಿ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ ಸಚಿವೆ ಕಡಿಯಾಳಿ ಮಹಿಷಮರ್ದಿನಿ ದೇಗುಲದ ಶಿಲ್ಪಕಲೆ, ತಿರುಗುವ ಮುಚ್ಚಿಗೆ, ಕಾಷ್ಟಶಿಲ್ಪ ವನ್ನು ಮನಸಾರೆ ಹೊಗಳಿದರು.
ಕರಸೇವಕರ ಮೂಲಕ ದೇಗುಲದ ತಳಪಾಯ ನಿರ್ಮಾಣ ಮಾಡಿರುವುದನ್ನು ಮೆಚ್ಚಿ ಶುಭಹಾರೈಸಿದರು. ಇಲ್ಲಿನ ನಿರಂತರ ಶಿಸ್ತುಬದ್ಧ ಸ್ವಯಂಸೇವಕರ ಪಡೆ ಕೇವಲ ರಾಜ್ಯ ಮಾತ್ರವಲ್ಲದೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಈ ರೀತಿಯ ಭವ್ಯ ದೇಗುಲ ಗ್ರಾಮಸ್ಥರು ಮತ್ತು ದೇವರ ಭಕ್ತರು ಸೇರಿ ಕಟ್ಟಿ ಭಗವಂತನಿಗೆ ಸಮರ್ಪಣೆ ಮಾಡಿದ್ದಾರೆ. ಸರ್ವರಿಗೂ ಜಗನ್ಮಾತೆ ಮಹಿಷಮರ್ದಿನಿ ಸನ್ಮಂಗಲ ಉಂಟು ಮಾಡಲಿ ಎಂದು ಹೇಳಿದರು. ತಾನು ಕೂಡ ಈ ಕರಸೇವೆಯಲ್ಲಿ ಸ್ವಯಂಸೇವಕಿಯಾಗಿ ಭಾಗವಹಿಸಿದ್ದು ತನ್ನ ಭಾಗ್ಯ ಎಂದು ನೆನಪಿಸಿಕೊಂಡರು.
ದೇವ ಸೇವೆ ಸಮಾಜ ಸೇವೆ ಎಂಬ ವಿಶಿಷ್ಟ ಪರಿಕಲ್ಪನೆಯಲ್ಲಿ ಪ್ರಚಾರಕ್ಕೆ ಬಳಸಿದ ಕೊಡೆಯನ್ನು ಈ ವೇಳೆ ಭಕ್ತರಿಗೆ ಕೇಂದ್ರ ಸಚಿವೆ ವಿತರಿಸಿದರು. ಬ್ರಹ್ಮಕಲಶೋತ್ಸವ ಯಶಸ್ವಿಯಾದ ಹಿನ್ನೆಲೆಯಲ್ಲಿ ಮತ್ತಷ್ಟು ಕೊಡೆಗಳನ್ನು ಭಕ್ತರಿಗೆ ವಿತರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.