ಸಕಲೇಶಪುರ: ಇಲ್ಲಿನ ಹೊಸಕೆರೆ ಬಳಿಯಲ್ಲಿ ಕುಟುಂಬವೊಂದು ಕಾರಿನಲ್ಲಿ ಚಲಿಸುತ್ತಿದ್ದ ವೇಳೆ, ಕಾಡಾನೆಯೊಂದು ಏಕಾಏಕಿ ಅಡ್ಡ ಬಂದು ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದು ಗಾಯಗೊಳಿಸಿದ ಘಟನೆ ನಡೆದಿದೆ.
ಕಾಡಾನೆ ದಾಳಿಯಿಂದ ಗಾಯಗೊಂಡ ಬಾಲಕಿ ಹಳೆಬಾಗೆ ಗ್ರಾಮದ ದೀಕ್ಷಿತಾ(16). ಪೋಷಕರ ಜೊತೆ ಮಾರುತಿ 800 ಕಾರಿನಲ್ಲಿ ಹೊಸಕೆರೆ ಗ್ರಾಮದ ಅಜ್ಜಿ ಮನೆಗೆ ಹೋಗಿ ವಾಪಾಸ್ ಆಗುತ್ತಿದ್ದಾಗ ಈ ಘಟನೆ ನಡೆದಿದೆ.
ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ದೀಕ್ಷಿತಾ ಪೋಷಕರಾದ ವಿನೋದ ಹಾಗೂ ಗಿರೀಶ್ ಕಾರು ನಿಲ್ಲಿಸಿ ಕೆಳಗಿಳಿದು ಓಡಿ ಹೋಗಿದ್ದಾರೆ. ಕಾಡಾನೆ ಕಂಡು ಗಾಬರಿಯಾದ ದೀಕ್ಷಿತಾ ಕಾರಿನಿಂದ ಓಡಲಾಗದೇ ಕಾರಿನಲ್ಲೇ ಕುಳಿತಿದ್ದಳು. ಈ ವೇಳೆ ದೀಕ್ಷಿತಾಳನ್ನು ಕಾಡಾನೆ ಸೊಂಡಿಲಿನಿಂದ ಎಳೆದುಕೊಂಡು ತುಳಿದು ಗಾಯಗೊಳಿಸಿದೆ. ಪೋಷಕರು ಕಿರುಚುತ್ತಿದ್ದಂತೆ ಕಾಡಾನೆ ಕಾಫಿ ತೋಟದೊಳಗೆ ಓಡಿ ಹೋಗಿದೆ.
ಗಾಯಗೊಂಡ ಬಾಲಕಿ ಸಕಲೇಶಪುರ ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.