ಕಡಬ; ಅತ್ತಿಗೆ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಕುಸುಮಾಧರ (37) ಬಂಧಿತ ಆರೋಪಿ.
ಅಮಾನವೀಯ ಘಟನೆಯೊಂದು ನಡೆದಿದೆ. ಸಂತ್ರಸ್ತೆ ಬೇಬಿ, ಕೆ.ಎಸ್. (35) ಎಂಬವರು ತಮ್ಮ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಅಲ್ಲಿ ಕೊರೆಸಿದ ಬೋರ್ವೆಲ್ನಲ್ಲಿ ನೀರು ಲಭಿಸಿತ್ತು. ಈ ವಿಚಾರದಲ್ಲಿ ಅಸೂಯೆಗೊಂಡ ಅವರ ಪತಿಯ ಸಹೋದರ ಕುಸುಮಾಧರ ಮೇ 6ರಂದು ಬೆಳಿಗ್ಗೆ ಪೆಟ್ರೋಲ್ ಕ್ಯಾನ್ನೊಂದಿಗೆ ಬಂದು ಬೇಬಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ.
ಬೇಬಿ ಅವರು ಜೋರಾಗಿ ಕೂಗಿಕೊಂಡಾಗ ನೆರೆಹೊರೆಯವರು ಧಾವಿಸಿ ಬಂದಿದ್ದಾರೆ. ತಕ್ಷಣವೇ ಆರೋಪಿಯು ಪೆಟ್ರೋಲ್ ಕ್ಯಾನ್ ಹಾಗೂ ಬೆಂಕಿ ಪೊಟ್ಟಣವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 57/2026, ಕಲಂ: 109(1) BNS-2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


