ಬೆಂಗಳೂರು: ಕೆ.ಆರ್. ಪುರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವೃದ್ಧೆಯೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಮೃತದೇಹವನ್ನು ತುಂಡರಿಸಿ ಡ್ರಮ್ನಲ್ಲಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ನಿಸರ್ಗ ಲೇಔಟ್ನ ಸರೋಜಮ್ಮ (78) ಮೃತರು. ಭಾನುವಾರದಂದು ಸರೋಜಮ್ಮ ವಾಸವಿದ್ದ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಮನೆಗೆ ಹೋಗಿ ಪರಿಶೀಲಿಸಿದಾಗ ಡ್ರಮ್ನಲ್ಲಿ ಮೃತದೇಹ ಪತ್ತೆಯಾಗಿರುತ್ತದೆ.
ಮೃತದೇಹ ತುಂಡರಿಸಿರುವ ಆರೋಪಿಗಳು: ಸರೋಜಮ್ಮ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ, ಪ್ರತ್ಯೇಕವಾಗಿ ವಾಸವಿದ್ದಾರೆ. ಮಗಳ ಜೊತೆ ಸರೋಜಮ್ಮ ನೆಲೆಸಿದ್ದರು. ಇವರ ಕೊಲೆಗೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಇನ್ನು ಸರೋಜಮ್ಮ ಅವರನ್ನು ಎರಡು ದಿನಗಳ ಹಿಂದೆಯೇ ಕೊಲೆ ಮಾಡಿರುವ ಸಂಶಯವಿದೆ. ಕೊಲೆ ನಂತರ, ಮೃತದೇಹವನ್ನು ತುಂಡರಿಸಿ ಡ್ರಮ್ನಲ್ಲಿ ತುಂಬಿಟ್ಟಿರುವ ಅನುಮಾನವಿದೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಮಾಹಿತಿ ಇದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.
ಡ್ರಮ್ ಸಮೇತ ಆಸ್ಪತ್ರೆಗೆ ಸಾಗಣೆ: ಮೃತದೇಹವನ್ನು ಹಲವು ಭಾಗಗಳಾಗಿ ತುಂಡರಿಸಿ ಡ್ರಮ್ನಲ್ಲಿಡಲಾಗಿದೆ. ಹೀಗಾಗಿ, ಡ್ರಮ್ ಸಮೇತ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವರದಿ ಬಂದ ನಂತರ ಸಾವಿನ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಆಸ್ತಿ ಹಾಗೂ ಕೌಟುಂಬಿಕ ವಿಚಾರಕ್ಕೆ ಕೊಲೆ ನಡೆದಿರುವ ಬಗ್ಗೆ ಸಂಶಯವಿದೆ. ಮಗಳು ಹಾಗೂ ಮಗನನ್ನೂ ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಹೇಳಿದರು.