ಕಾಸರಗೋಡು: ತುಳುನಾಡಿನ ಪರಂಪರೆಯನ್ನು ಕಿರುಚಿತ್ರದ ಮೂಲಕ ವಿಶಿಷ್ಟವಾಗಿ ಸಾದರಪಡಿಸಲು ಕಾಸರಗೋಡಿನ ಯುವಕರ ತಂಡ ಸಜ್ಜಾಗಿದೆ. ನಿಟ್ಟೆ ಕಾಲೇಜಿನ ಪತ್ರಿಕೋದ್ಯಮ ವಿಷಯದ ಸಹಾಯಕ ಪ್ರಾಧ್ಯಾಪಕ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ವಿವೇಕ್ ಆದಿತ್ಯ ಈ ಕಿರು ಚಿತ್ರವನ್ನು ನಿರ್ದೇಶಿದ್ದಾರೆ.
ಪರಶುರಾಮನ ಸೃಷ್ಟಿಯ ತುಳುನಾಡಿನಲ್ಲಿ ಅಲ್ಲಿನ ಆಚರಣೆ, ಸಂಪ್ರದಾಯ, ಪದ್ಧತಿಗಳಿಗೆ ಒಂದೊಂದು ಹಿನ್ನೆಲೆ ಹಾಗೂ ವಿಶೇಷವಾದ ಪ್ರಾಧಾನ್ಯತೆ ಇದೆ. ತುಳುನಾಡಿನ ವಿಶೇಷ ಆರಾಧನೆಗಳು, ಕಂಬಳ, ಮುಳಿ ಹುಲ್ಲಿನ ಮನೆ, ನಿಸರ್ಗ ಸೌಂದರ್ಯದೊಂದಿಗೆ ಮಾರಿ ಕಳೆವ ಆಟಿ ಕಳಂಜ, ಬೇಟೆ ದೃಶ್ಯಗಳು ಇವೆಲ್ಲಾ ತುಳುನಾಡಿನ ಸೊಗಡನ್ನೂ, ಸಂಸ್ಕೃತಿಯನ್ನೂ ಪ್ರತಿಬಿಂಬಿಸುತ್ತದೆ.
ಇಂತಹ ಮಣ್ಣಿನ ನೈಜ ಸೊಗಡನ್ನು ಇಟ್ಟುಕೊಂಡು ಹೆಣೆದಿರುವ ತುಳು ಕೌಟುಂಬಿಕ ಸಾಮರಸ್ಯದ ಕಿರುಚಿತ್ರ ‘ಜಗತ್’ ಇದರ ಟ್ರೇಲರ್ ಜುಲೈ 13ರಂದು ಬಿಡುಗಡೆಯಾಗಲಿದೆ. ಧಾರ್ಮಿಕ ಮುಂದಾಳು ದಿವಾಕರ ಶಾಸ್ತ್ರಿ ಬೆಂಗಳೂರಿನಲ್ಲಿ ಟ್ರೈಲರ್ ಲಾಂಚ್ ಮಾಡಲಿದ್ದಾರೆ.
ತುಳುನಾಡ ಸಂಸ್ಕೃತಿ, ಪರಂಪರೆ, ಸಮೃದ್ಧಿಯೊಂದಿಗೆ ಕೌಟುಂಬಿಕ ಕಥಾವಸ್ತುವುಳ್ಳ ಉತ್ತಮ ಕಥಾಚಿತ್ರ ಜಗತ್ (ಉಂದು ಗುತ್ತುದ ಗಮ್ಮತ್)
ಶ್ರೀ ಸುಬ್ರಹ್ಮಣ್ಯೇಶ್ವರ ಕಂಬೈನ್ಸ್ ನಿರ್ಮಾಣದಲ್ಲಿ ಮೂಡಿಬಂದಿದೆ.
ಆರ್.ಎಸ್. ಮೀಡಿಯಾ ಅರ್ಪಿಸುವ ಕಿರುಚಿತ್ರದಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ನಾಳೆ ಆರ್ ಎಸ್ ಮೀಡಿಯಾ ಯುಟ್ಯೂಬ್ ಚಾನಲ್ ನಲ್ಲಿ ಟ್ರೈಲರ್ ಅನವಾರಣಗೊಳ್ಳಲಿದೆ.
ಚಿತ್ರದ ನಾಯಕನಾಗಿ ಅಭಿ ಗುತ್ತು ನಾಯಕಿಯಾಗಿ ಸ್ಯಾಂಡ್ರಾ ಮಾರ್ಟಿಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಅಮೃತೇಶ್, ಉದಯ ಕನಿಯಾಲ, ಶೃತಿ ಕನಿಯಾಲ, ಅಕ್ಷತಾ ಶಶಿಕಿರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿರಣ್ ಭಟ್ ಗುತ್ತಿನ ಯಜಯಾನ ಜಗದೀಶ್ ಶೆಟ್ರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೌರವ ಪಾತ್ರದಲ್ಲಿ ಅರುಣ್ ಕುಲಾಲ್ ಚೇವಾರು ಅಭಿನಯಿಸಿದ್ದಾರೆ.
ತುಳು ಚಿತ್ರರಂಗದ ನಿಕಟ ಸಂಪರ್ಕ ಹೊಂದಿರುವ ಕಿರಣ್ ಭಟ್ ಚಿತ್ರ ನಿರ್ಮಾಣ ಹಾಗೂ ವಿವೇಕ್ ಆದಿತ್ಯ ನಿರ್ದೇಶನ ಮಾಡಿದ್ದಾರೆ. ಕ್ಯಾಮರಾ ಹಾಗೂ ಸಂಕಲನದಲ್ಲಿ ರಂಜಿತ್ ಶರ್ಮಾ ಮಾಣಿತ್ತೋಡಿ ಕೈ ಚಳಕವಿದೆ. ತುಳುನಾಡಿನ ಎರಡು ಗುತ್ತಿನ ಮನೆಗಳ ಕಥೆಯನ್ನು ಹೊಂದಿರುವ ಕಿರುಚಿತ್ರವನ್ನು ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.
ಎಲ್ಲರೂ ತೌಳವರ ಗತ್ತಿನ ಸಾಮ್ರಾಜ್ಯವನ್ನು, ಕೌಟುಂಬಿಕ ಸಾಮರಸ್ಯದ ಹಾದಿಯನ್ನು ಜಗತ್ ಮೂಲಕ ನೋಡಿ ಆನಂದಿಸಬಹುದು. ಚಿತ್ರವನ್ನು ಇತ್ತೀಚೆಗೆ ಕನ್ನಡ ಚಿತ್ರರಂಗವನ್ನು ಅಗಲಿದ ಚಿರು ಸರ್ಜಾರಿಗೆ ಅರ್ಪಿಸಲಾಗಿದೆ ಎಂದು ಚಿತ್ರ ತಂಡ ಹೇಳಿದೆ. ಕಂಬಳ, ಗುತ್ತಿನ ಮನೆ, ಪೊಸಡಿಗುಂಪೆ, ಆಟಿಕಳಂಜ, ಗುತ್ತಿನ ಗತ್ತಿಗೆ ಆಧಾರವಾದ ಗದ್ದೆ, ತೋಟಗಳು ಬಹಳ ಸುಂದರವಾಗಿ ಚಿತ್ರದಲ್ಲಿ ಮೂಡಿಬಂದಿದೆ.