ಬಂಟ್ವಾಳ: ಗ್ರಾ.ಪಂ. ಕಟ್ಟಡ ಕಾಮಗಾರಿಗಾಗಿ ತಂದಿರಿಸಲಾಗಿದ್ದ ಕಬ್ಬಿಣದ ರಾಡ್ ಕದ್ದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸರಪಾಡಿ ಪೆರ್ಲ ದರ್ಖಾಸು ನಿವಾಸಿ ವಾಹನ ಚಾಲಕ ವಿನೋದ್ ಕುಮಾರ್, ಬೆಳ್ತಂಗಡಿ ತಾಲೂಕಿನ ಪುತ್ರಿಲ ನಿವಾಸಿ ಪುನೀತ್ , ಅಲ್ಲಿಪಾದೆ ಪುರುಷೋತ್ತಮ ಮೂವರು ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 70 ಸಾವಿರ ಮೌಲ್ಯದ 600 ಕೆ.ಜಿ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.ಬಂಧಿತರು ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ ನಡೆಯತ್ತಿದ್ಧ ಕಟ್ಟಡ ಕಾಮಗಾರಿಗೆಂದು ತಂದು ದಾಸ್ತಾನು ಮಾಡಲಾಗಿದ್ದ ಕಬ್ಬಿಣದ ರಾಡ್ ಗಳನ್ನು ಮಾರ್ಚ್ 18 ರಂದು ಕದ್ದಿದ್ದರು. ಕಟ್ಟಡ ಕಾಮಗಾರಿ ನಡೆಸಲು ತಂದ ಕಬ್ಬಿಣದ ಸೊತ್ತುಗಳು ಕಳವಾದ ಬಗ್ಗೆ ಇಲ್ಲಿನ ಪಿಡಿಒ ರವಿ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು.
ಆ ಬಳಿಕ ಪೋಲಿಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಇಂದು ಬೆಳಿಗ್ಗೆ ಎಸ್.ಐ.ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಮೊಡಂಕಾಪು ಎಂಬಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಸಮರ್ಪಕವಾಗಿ ಉತ್ತರ ನೀಡದ ಚಾಲಕ ಸಹಿತ ವಾಹನದಲ್ಲಿದ್ದ ಮೂವರನ್ನು ವಿಚಾರ ನಡೆಸಿದಾಗ ಅಮ್ಟಾಡಿಯಲ್ಲಿ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ನಗರ ಠಾಣಾ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ , ಅಪರಾಧ ವಿಭಾಗದ ಸಿಬ್ಬಂದಿರಾಜೇಶ್ ,ಇರ್ಶಾದ್ ಮತ್ತು ತಾಂತ್ರಿಕ ಸಹಾಯ ದಿವಾಕರ್ ಮತ್ತು ಸಂಪತ್ತು ಜಿಲ್ಲಾ ಪೊಲೀಸ್ ಕಚೇರಿ ಇನ್ಸ್ಪೆಕ್ಟರ್ ರವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.