ಅಹಮ್ಮದಾಬಾದ್ (ಗುಜರಾತ್) :ಕೋವಿಡ್ 19 ಮಹಾಮಾರಿಯ ಸೋಂಕಿನಿಂದ ವಿಶ್ವ ಪ್ರಸಿದ್ಧ ಜ್ಯೋತಿಷಿ ಬೇಜಾನ್ ದಾರುವಾಲಾ (90ವರ್ಷ) ಅಹಮ್ಮದಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿರುವುದಾಗಿ ವರದಿ ತಿಳಿಸಿದೆ. ದಾರುವಾಲಾಗೆ ದೇಶಾದ್ಯಂತ ಲಕ್ಷಾಂತರ ಮಂದಿ ಅನುಯಾಯಿಗಳಿದ್ದರು ಎಂದು ವರದಿ ವಿವರಿಸಿದೆ.
ಅವರ ನಿಧನದ ಕುರಿತು ಟ್ವೀಟ್ ಮಾಡಿರುವ ಗುಜರಾತ್ ಸಿಎಂ ವಿಜಯ್ ರೂಪಾಣಿ ಶೋಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ರೋಪಾಣಿ “ಖ್ಯಾತ ಜ್ಯೋತಿಷಿ ಶ್ರೀ ಬೇಜಾನ್ ದಾರುವಾಲಾ ಅವರ ನಿಧನದ ಸುದ್ದಿ ಅಪಾರ ನೋವು ತಂದಿದೆ. ಅಗಲಿದ ಅವರ ಆತ್ಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಹಾಗೂ ಸಾಂತ್ವನ ಹೇಳುತ್ತೇನೆ” ಎಂದಿದ್ದಾರೆ.
ದೇಶದ ರಾಜಕೀಯ ಭವಿಷ್ಯವನ್ನು ನುಡಿಯುವಲ್ಲಿ ಸಿದ್ಧಹಸ್ತರಾಗಿದ್ದ ಬೇಜಾನ್ ದಾರುವಾಲಾ ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ಆಯ್ಕೆಯಾಗುವುದನ್ನು ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೂ ದಾರುವಾಲಾ ಭವಿಷ್ಯ ನುಡಿದಿದ್ದರು. ರಾಜೀವ್ ಗಾಂಧಿ ಅವರ ಹತ್ಯೆ, ಸಂಜಯ್ ಗಾಂಧಿ ದುರಂತ, ಭೋಪಾಲ್ ಗ್ಯಾಸ್ ದುರಂತದ ಬಗ್ಗೆಯೂ ದಾರುವಾಲಾ ಭವಿಷ್ಯ ನುಡಿದಿದ್ದರು.