ಬೆಳ್ತಂಗಡಿ: ಉಜಿರೆ -ಚಾರ್ಮಾಡಿ ರಸ್ತೆಯ ಕಲ್ಮಂಜ ಗ್ರಾಮದ ತಾಕೋಟೆ ಕಟ್ಟೆ ಸಮೀಪ ಗುರಿಪಳ್ಳ-ಕನ್ಯಾಡಿ- ಇಂದಬೆಟ್ಟು-ನಡ ಮೊದಲಾದ ಪ್ರದೇಶಗಳಿಗೆ ಬಹುಮುಖ್ಯ ಸಂಪರ್ಕ ರಸ್ತೆಯು ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ.
ಶಾಸಕ ಹರೀಶ್ ಪೂಂಜ ಹಾಗೂ ಸ್ಥಳೀಯರ ಮುತುವರ್ಜಿಯಿಂದ 12 ಅಡಿ ಅಗಲದ 140 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ಪೂರ್ಣಗೊಂಡು ಅ.31ರಂದು ಉದ್ಘಾಟನೆಗೆ ರೆಡಿಯಾಗಿದೆ.
ಮುಖ್ಯರಸ್ತೆಯಿಂದ ಗುರಿಪಳ್ಳ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಬಹುದಿನಗಳಿಂದ ಬೇಡಿಕೆಯಿತ್ತು. ರಸ್ತೆ ವ್ಯವಸ್ಥೆ ಇಲ್ಲದೆ ಈ ಭಾಗದ ಸಾವಿರಾರು ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದರು. ಈ ಕುರಿತು ಅನೇಕ ಶಾಸಕರು ರಸ್ತೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಪ್ರಯತ್ನಿಸಿದ್ದರು. ಆದರೆ ರಸ್ತೆಯ ಆರಂಭದ ಭಾಗ ಮುಂಡಾಜೆಯ ಗುಂಡಿ ಮನೆತನದ ಕಿರಣ್ ಖಾಡಿಲ್ಕರ್ ಅವರ ಪಟ್ಟಾ ಸ್ಥಳವಾಗಿತ್ತು. ಹೀಗಾಗಿ ಇತ್ತೀಚೆಗೆ ಶಾಸಕ ಹರೀಶ್ ಪೂಂಜ, ಬಿಜೆಪಿ ರೈತಮೋರ್ಚ ತಾಲೂಕು ಅಧ್ಯಕ್ಷ ಜಯಂತ ಗೌಡ ಗುರಿಪಳ್ಳ ಮತ್ತಿತರರು ಮಾತುಕತೆ ನಡೆಸಿದ್ದರು. ಇದರ ಫಲವಾಗಿ ಮಾಲಕರು ಕೆಲ ಷರತ್ತಿನ ಮೇರೆಗೆ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಿದ್ದರು.ಅ.2ರಂದು ರಸ್ತೆಗೆ ಶಾಸಕ ಹರೀಶ್ ಪೂಂಜ, ಜಾಗದ ಮಾಲಕ ಕಿರಣ್ ಖಾಡಿಲ್ಕರ್ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಆರಂಭವಾಗಿತ್ತು. ಹತ್ತು ದಿನಗಳೊಳಗೆ ಕಾಮಗಾರಿ ಪೂರ್ಣಗೊಂಡು, ಈ ರಸ್ತೆಯಿಂದ ಇಂದಬೆಟ್ಟು, ಗುರಿಪಳ್ಳ, ಕನ್ಯಾಡಿ ಸುತ್ತಮುತ್ತ ಮಂದಿಗೆ ಅನುಕೂಲ ಕಲ್ಪಿಸಿದಂತಾಗಿದೆ.