ಕೇರಳ: ಇಲ್ಲಿನ ಎರ್ನಾಕುಲಂ-ಅಂಗಮಾಲಿ ಧರ್ಮಪ್ರಾಂತ್ಯದ ಹಲವಾರು ಪಾದ್ರಿಗಳಿಗೆ ಅಂಚೆ ಮೂಲಕ ಕೇರಳದ ಸಿರೋ-ಮಲಬಾರ್ ಚರ್ಚ್ ಅಳವಡಿಸಿಕೊಂಡ ನಿಯಮಗಳನ್ನು ಅನುಸರಿಸದಿದ್ದಲ್ಲಿ ‘ಕೈಗಳನ್ನು ಕತ್ತರಿಸುವುದಾಗಿ’ ಬೆದರಿಕೆ ಪತ್ರ ಬಂದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎರ್ನಾಕುಲಂ-ಅಂಗಮಾಲಿ ಧರ್ಮಪ್ರಾಂತ್ಯದ ಕೆಲವು ಪಾದ್ರಿಗಳು ಪತ್ರಗಳನ್ನು ಸ್ವೀಕರಿಸಿದ್ದು, 2024 – ಕ್ರಿಸ್ಮಸ್ ಉಡುಗೊರೆ ಎಂಬ ಶೀರ್ಷಿಕೆಯ ಆ ಪತ್ರದಲ್ಲಿ, ಇದು ‘ಎರ್ನಾಕುಲಂ-ಅಂಗಮಾಲಿ’ ಧರ್ಮಪ್ರಾಂತ್ಯದ ಬಂಡಾಯ ಪಾದ್ರಿಗಳಿಗೆ ಉಡುಗೊರೆಯಾಗಿದೆ ಎಂದು ಬರೆಯಲಾಗಿದೆ.
ಪತ್ರದಲ್ಲಿ ಹೀಗೆ ಬರೆಯಲಾಗಿದೆ; ಚರ್ಚಿಗೆ ವಿಧೇಯರಾಗದ ನೀವು ಮದುವೆಯಾಗಬಹುದು ಮತ್ತು ಸಂಪೂರ್ಣವಾಗಿ ಚರ್ಚ್ ವಿರುದ್ಧ ತಿರುಗಿ ಬೀಳಬಹುದು. ಇಲ್ಲದಿದ್ದರೆ ಸಿರೋ-ಮಲಬಾರ್ ಚರ್ಚ್ನ ಶತಮಾನೋತ್ಸವದ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬಂಡಾಯ ಪಾದ್ರಿಗಳ ಮತ್ತು ಬಿಷಪ್ಗಳ ತೋಳುಗಳನ್ನು ಕತ್ತರಿಸಲು ಭಕ್ತರು ನಿರ್ಧರಿಸಿದ್ದಾರೆ. ಕ್ರಿಸ್ಮಸ್ ಸಂದರ್ಭದಲ್ಲಿ ಶಿಕ್ಷೆಯನ್ನು ಜಾರಿಗೊಳಿಸಲು ಭಕ್ತರ ಸಮುದಾಯ ಸಾಕಷ್ಟು ಯೋಜನೆ ರೂಪಿಸಿದೆ ಎಂದು ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ. ವಿಶ್ವಾಸಿಗಳಿಗೆ ಚರ್ಚ್ ನಿಯಮವನ್ನು ಪಾಲಿಸದ ಬಿಷಪ್ಗಳು ಮತ್ತು ಪಾದ್ರಿಗಳ ಅಗತ್ಯವಿಲ್ಲ ಎಂದು ನಾವು ಘೋಷಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಕುರಿತು ಅನೇಕ ಪಾದ್ರಿಗಳು ಪ್ರತ್ಯೇಕವಾಗಿ ಪೊಲೀಸ್ ದೂರುಗಳನ್ನು ದಾಖಲಿಸಿದ್ದು, ಇದೀಗ ಜಂಟಿ ದೂರನ್ನು ಕೂಡ ದಾಖಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ಪತ್ರದ ಬಗ್ಗೆ ಮಾತನಾಡಿದ ಪಾದ್ರಿಯೋರ್ವರು, “ಮೂಲಭೂತವಾದಿಯೋರ್ವ ಅಂಗೈಯನ್ನು ಕತ್ತರಿಸಿದ ಟಿಜೆ ಜೋಸೆಫ್ ಅವರ ಘಟನೆ ನಮಗೆ ತಿಳಿದಿದೆ. ಈ ಬೆದರಿಕೆಯು ಇದೇ ರೀತಿಯದ್ದಾಗಿದೆ. ಇದೀಗ ತೀವುವಾದ ಮೂಲಭೂತವಾದಗಳು ಬೆಳೆಯುತ್ತಿವೆ,” ಎಂದು ಹೇಳಿದ್ದಾರೆ.
ಇದರ ಹಿಂದೆ ಸ್ಪಷ್ಟ ಷಡ್ಯಂತ್ರವಿದೆ ಎಂದು ಮತ್ತೋರ್ವ ಪಾದ್ರಿ ಹೇಳಿದ್ದು, ಇದು ಕೇವಲ ಯಾದೃಚ್ಛಿಕ ಬೆದರಿಕೆ ಪತ್ರವಲ್ಲ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಇನ್ನು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸೈರೋ-ಮಲಬಾರ್ ಚರ್ಚ್ ಸದಸ್ಯರು ಪವಿತ್ರ ಮಾಸ್ನ್ನು ಆಚರಿಸುವ ವಿಧಾನದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕ್ಯಾಥೋಲಿಕ್ ಚರ್ಚ್ನ ಅಡಿಯಲ್ಲಿ ಮಾಸ್ ಅರ್ಪಿಸುವ ಬಗ್ಗೆ, ಏಕರೂಪದ ವಿಧಾನವನ್ನು ಜಾರಿಗೆ ತರಲಾಗಿತ್ತು. ಅದರೆ ಕೆಲವು ಧರ್ಮಪ್ರಾಂತ್ಯದ ಪಾದ್ರಿಗಳಿಗೆ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ.