ಉಡುಪಿ: ಈ ಬಾರಿ ಕೋವಿಡ್ ಕಾರಣಕ್ಕೆ ಹಲವು ಕ್ಷೇತ್ರಗಳು ತಮ್ಮ ಕಾರ್ಯ ಚಟುವಟಿಕೆಗಳ ರೂಪುರೇಷೆ ಬದಲಿಸಿವೆ. ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಯಕ್ಷಗಾನ ಮೇಳಗಳು ಈ ಬಾರಿ ತಿರುಗಾಟದ ಆರಂಭದ ದಿನಗಳಲ್ಲಿ ಆಯಾಯ ಕ್ಷೇತ್ರದಲ್ಲೇ ಸೇವೆ ಸಲ್ಲಿಸಲು ಆದ್ಯತೆ ನೀಡಿವೆ. ಕೋವಿಡ್ ಅಬ್ಬರ ತಗ್ಗಿದ ನಂತರ ಸಂಚಾರಿ ಮೇಳದಲ್ಲಿ ತೊಡಗಲು ನಿರ್ಧರಿಸಿವೆ. ಆದರೆ ಕ್ಷೇತ್ರದ ಮೇಳಗಳಿಗೆ ಕೆಲವು ಧಾರ್ಮಿಕ ನಿಬಂಧನೆಗಳು ಇರುವುದರಿಂದ ಎಚ್ಚರಿಕೆಯ ಹೆಜ್ಜೆಯಿಡುತ್ತಿವೆ.
ಯಕ್ಷಗಾನ ಕಲಾವಿದರಿಗೆ ತಿರುಗಾಟಕ್ಕೆ ಮುನ್ನ ಹಾಗೂ ಆರಂಭದ ಬಳಿಕ ಪ್ರತಿ 3 ದಿನಕ್ಕೊಮ್ಮೆ ಉಚಿತ ಕೊರೊನಾ ಪರೀಕ್ಷೆ ಮಾಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ಘೋಷಿಸಿದ್ದಾರೆ.ಬಹುತೇಕ ಮೇಳಗಳು ತಿರುಗಾಟ ದಿನವನ್ನು ನಿಶ್ಚಯಸಿದ್ದು ಜಿಲ್ಲಾಡಳಿತದ ಮಾರ್ಗಸೂಚಿಯನ್ನು ನಿರೀಕ್ಷಿಸುತ್ತಿವೆ.
ಧರ್ಮಸ್ಥಳ ಮೇಳ 30 ದಿನ ಕ್ಷೇತ್ರದಲ್ಲಿ ಆಟ ನಡೆಸಲು ಮುಂದಾಗಿದೆ.ಕಟೀಲಿನಲ್ಲಿ ಕ್ಷೇತ್ರದಿಂದ ಹೊರಗೆ ಪ್ರದರ್ಶನಕ್ಕೆ ಚಿಂತನೆ ನಡೆಸಲಾಗಿದೆ.ಮಂದಾರ್ತಿಯ 5 ಮೇಳಗಳು ಈಗಾಗಲೇ ಮಳೆಗಾಲದ ಸೇವೆ ಆಟಗಳನ್ನು ಕ್ಷೇತ್ರದಲ್ಲಿ ನಡೆಸಲಾರಂಭಿಸಿವೆ. ಮಾರಣಕಟ್ಟೆ 3 ಮೇಳಗಳ ತಿರುಗಾಟ ನವಂಬರ್ ಕೊನೆಗೆ ಆರಂಭವಾಗಲಿದೆ. ಪೆರ್ಡೂರು ಹಾಗೂ ಸಾಲಿಗ್ರಾಮ ಎರಡೇ ಡೇರೆ ಮೇಳಗಳಿದ್ದು ತಿರುಗಾಟದ ತೀರ್ಮಾನವಾಗಿಲ್ಲ.