ಮೈಸೂರು: ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಸಿಎಂ ಸಿದ್ದರಾಮಯ್ಯ ಪತ್ರಕರ್ತರೊಂದಿಗೆ ಮಾತನಾಡಿ, ಬರ ಪರಿಹಾರದ ಕುರಿತ ವಿಚಾರಗಳನ್ನು ಹಂಚಿಕೊಂಡರು.
‘ಈಗಾಗಲೇ ಕೇಂದ್ರ ಸರ್ಕಾರಕ್ಕೆ ‘ಬರ ಪರಿಹಾರ ಕೋರಿ ಮನವಿ ಸಲ್ಲಿಸಿದ್ದೇವೆ. ಅಲ್ಲಿಂದ ತಂಡವೂ ಬಂದು ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಅದು ಸುಳ್ಳಾದರೆ ನಾನು ರಾಜೀನಾಮೆ ಕೊಡಲು ಸಿದ್ಧವಿದ್ದೇನೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಡುತ್ತಾರೆಯೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
‘ನಾವು ಅಕ್ಟೋಬರ್ನಲ್ಲೇ ಮೂರು ಮನವಿ ಸಲ್ಲಿಸಿದ್ದೇವೆ. ಅದಾದ ಮೇಲೆ ಕೇಂದ್ರದ ಅಧಿಕಾರಿಗಳ ತಂಡ ಬಂದಿತ್ತು. ಪರಿಶೀಲನೆ ನಡೆಸಿ ವರದಿ ಕೊಟ್ಟಿದೆ. ನಾನು ಡಿಸೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಕೊಟ್ಟಿದ್ದೆ. ಅಮಿತ್ ಶಾ ಅವರನ್ನೂ ಭೇಟಿಯಾಗಿದ್ದೆ. ಇದಾಗಿ ನಾಲ್ಕು ತಿಂಗಳಾದರೂ ಪರಿಹಾರ ಬಂದಿಲ್ಲ. ವಿಳಂಬ ಮಾಡುತ್ತಿರುವುದೇಕೆ? ನಾವು ಕೇಂದ್ರಕ್ಕೆ ಮನವಿ ಕೊಟ್ಟಿದ್ದು, ಭೇಟಿ ಆಗಿದ್ದೆಲ್ಲವೂ ಸತ್ಯವಲ್ಲವೇ? ಈಗಗಾಲೇ ಈ ಕುರಿತು ನೆ. ಎಲ್ಲ ದಾಖಲೆಗಳನ್ನು ಸುಪ್ರೀಂ ಕೋರ್ಟ್ಗೇ ಕೊಟ್ಟಿದ್ದೇವೆ. ದಾಖಲೆಗಳು ಇಲ್ಲದಿದ್ದರೆ ಕೋರ್ಟ್ಗೆ ಹೋಗಲಾದೀತೇ?,’ ಎಂದು ಕೇಳಿದರು.
‘ಅಮಿತ್ ಶಾ ದೇಶದ ಗೃಹ ಸಚಿವರಾಗಿ ಸುಳ್ಳು ಹೇಳುವುದ್ಯಾಕೆ? ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ? ಸತ್ಯದ ತಲೆ ಮೇಲೆ ಒಡೆದಂತೆ ಸುಳ್ಳು ಹೇಳುತ್ತಾರೆ. ನಾವ್ಯಾಕೆ ಸುಳ್ಳು ಹೇಳೋಣ?,’ ಎಂದು ಕೇಳಿದರು.
‘ಎನ್.ಡಿ.ಆರ್.ಎಫ್. ಅಡಿ ಬರ ಪರಿಹಾರ ಹಣ ಕೊಡಲೇಬೇಕು. ಆ ಹಣವನ್ನು ಈವರೆಗೂ ಕೊಡದ ಬಿಜೆಪಿಯವರಿಗೆ ಮತದಾರರು ಮತ ಹಾಕಬಾರದು. ಇದು ಕೇಂದ್ರ ಸರ್ಕಾರದ ಹಣ ಅಲ್ಲ; ರಾಜ್ಯದ್ದೇ,’ ಎಂದರು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ, ಪಕ್ಷದ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ ಜತೆಗಿದ್ದರು.