ಚಿಕ್ಕಮಗಳೂರು: ಮುಖ್ಯಮಂತ್ರಿಯಾಗುವುದಕ್ಕಾಗಿ ನಾನು ಗಡ್ಡ ಬಿಟ್ಟಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಮುಂದಿನ ವರ್ಷದ ಮಾರ್ಚ್ ತಿಂಗಳಿಗೆ ಗಡ್ಡಧಾರಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಜಯನಗರ ಜಿಲ್ಲೆಯ ಮೈಲಾರ ಲಿಂಗ ಭವಿಷ್ಯದ ಬಗ್ಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಈ ಹೇಳಿಕೆ ನೀಡಿದ್ದಾರೆ.
ವಿಜಯನಗರದ ಮೈಲಾರಲಿಂಗ ಭವಿಷ್ಯ ವಿಚಾರದ ಬಗ್ಗೆ
ನನಗೆ ಗೊತ್ತಿಲ್ಲ, ನಾನಂತೂ ಮುಖ್ಯಮಂತ್ರಿ ಆಗಬೇಕು ಅನ್ನೋದಕ್ಕೆ ಗಡ್ಡ ಬಿಟ್ಟಿದ್ದಲ್ಲ, ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡ ಬಿಟ್ಟಿದ್ದೇನೆ ಎಂದು ರವಿ ಹೇಳಿದ್ದಾರೆ.
ಗಡ್ಡಧಾರಿ ಅಂತ ಅವರು ಹೇಳಿದ್ದು ನಿಜವಾಗಿದ್ರೆ ಬಹಳ ಜನ ಗಡ್ಡ ಬಿಡಬಹುದು, ಯಾರು ಯಾರು ಮುಖ್ಯಮಂತ್ರಿಯಾಗಬೇಕು ಅಂತಾ ಆಕಾಂಕ್ಷಿಗಳು ಇರುತ್ತಾರೋ ಅವರೆಲ್ಲರೂ ಗಡ್ಡ ಬಿಡಲು ಪ್ರಾರಂಭಿಸಬಹುದು ಎಂದು ಹೇಳಿರುವ ಸಿ.ಟಿ. ರವಿ, ನನಗೆ ಪಕ್ಷ ನಿಷ್ಠೆ, ಶ್ರಮದ ಮೇಲೆ ನಂಬಿಕೆ ಇದೆ, ಏನೇನು ಭಗವಂತ ಬರೆದಿದ್ದಾನೋ, ತಾಯಿಯ ಆರ್ಶಿವಾದ ಇದೆಯೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸಿಎಂ ಸ್ಥಾನದ ರೇಸ್ ನಲ್ಲಿ ಕೆಲವು ದಿನಗಳ ಹಿಂದೆ ಒಕ್ಕಲಿಗ ಕೋಟಾದಡಿ ಸಿ.ಟಿ. ರವಿ ಹೆಸರು ಮುಂಚೂಣಿಯಲ್ಲಿತ್ತು.