ಸುಬ್ರಹ್ಮಣ್ಯ: ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಹೈದರಾಬಾದ್ ನ ಉದ್ಯಮಿ ನಾಲ್ಕು ಗೋವುಗಳನ್ನು ದಾನ ಮಾಡಿದ್ದಾರೆ.
ಹೈದರಾಬಾದ್ನ ಎಎಂಆರ್ ಗ್ರೂಪ್ನ ಆಡಳಿತ ನಿರ್ದೇಶಕ ಎ. ಮಹೇಶ್ ರೆಡ್ಡಿ ಸುಮಾರು 7 ಲಕ್ಷ ರೂ. ಮೌಲ್ಯದ ಪುಂಗನೂರು ತಳಿಯ 4 ಗೋವುಗಳನ್ನು ದಾನವಾಗಿ ನೀಡಿದ್ದಾರೆ. ಬಿಳಿ ಬಣ್ಣದ ಹಾಲು ಕರೆಯುವ 3 ಗೋವುಗಳು ಹಾಗೂ 1 ಕರುವನ್ನು ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದ ಬಳಿಗೆ ತಂದು ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಿ, ಬಳಿಕ ವೈದಿಕ ವಿಧಿ ವಿಧಾನಗಳ ಮೂಲಕ ದೇಗುಲಕ್ಕೆ ಹಸ್ತಾಂತರಿಸಲಾಯಿತು.
ಮಹೇಶ್ ರೆಡ್ಡಿ ಈ ಹಿಂದೆ 27 ಲಕ್ಷ ರೂ. ವೆಚ್ಚದಲ್ಲಿ ಭೋಜನ ಪ್ರಸಾದ ತಯಾರಿ ಮತ್ತು ಲಡ್ಡು ಪ್ರಸಾದ ತಯಾರಿ ಯಂತ್ರೋಪಕರಣಗಳನ್ನು ಹಾಗೂ ಷಣ್ಮುಖ ಪ್ರಸಾದ ಭೋಜನ ಶಾಲೆಗೆ ಭೋಜನ ಪ್ರಸಾದ ವಿತರಣೆಗೆ ಗಾಡಿಗಳನ್ನು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಎಸ್. ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಪಿಜಿಎಸ್ಎನ್ ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡುಕಜೆ, ವನಜಾ ವಿ. ಭಟ್, ಶೋಭಾ ಗಿರಿಧರ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಮೊದಲಾದವರಿದ್ದರು.