ಬೆಳಗಾವಿ; ತವರು ಮನೆ ಬಿಟ್ಟು ಬರಲು ಒಪ್ಪದ ಹೆಂಡತಿ ಮೇಲೆ ಗಂಡ ಗುಂಡು ಹಾರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಶಿವಾನಂದ ಕಾಲೆಬಾಗ(40) ಹೆಂಡತಿಯ ಮೇಲೆ ಗುಂಡು ಹಾರಿಸಿದ ಭೂಪ.
ಅಥಣಿಯ ಪ್ರೀತಿ ಎಂಬಾಕೆಯನ್ನು ಸಿಂಧಗಿಯ ಶಿವಾನಂದನಿಗೆ 4 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಕೆಲವು ತಿಂಗಳು ಚೆನ್ನಾಗಿ ಜೀವನ ಮಾಡಿಕೊಂಡಿದ್ದ ಆರೋಪಿ ಬಳಿಕ ಬೇರೊಂದು ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪ್ರೀತಿ ಅಥಣಿಯ ತವರು ಮನೆಗೆ ಬಂದು ವಾಸವಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗುವೂ ಇದೆ.
ಆದರೆ ಆ.12 ರಂದು ಅಥಣಿಗೆ ಬಂದ ಶಿವಾನಂದ ತನ್ನಲ್ಲಿದ್ದ ರಿವಾಲ್ವರನ್ನು ತೋರಿಸಿ ಬೆದರಿಸಿ ತನ್ನ ಜತೆ ವಾಪಸ್ ಬರುವಂತೆ ಧಮಕಿ ಹಾಕಿದ್ದ. ಅಲ್ಲದೇ ರಿವಾಲ್ವರಿನಿಂದ ಎರಡು ಗುಂಡುಗಳನ್ನು ಹಾರಿಸಿದ್ದಾನೆ. ತನ್ನ ಜತೆ ಬಾರದಿದ್ದರೆ ರಿವಾಲ್ವರಿನಲ್ಲಿರುವ ಉಳಿದ ಗುಂಡುಗಳನ್ನು ನಿನ್ನ ತಲೆಗೆ ಹೊಡೆಯುತ್ತೇನೆ ಪತ್ನಿಗೆ ಧಮಕಿ ಹಾಕಿದ್ದಾನೆ.
ಹೆದರಿದ ಪ್ರೀತಿ ಅಥಣಿ ಠಾಣೆಗೆ ದೂರು ನೀಡಿದ್ದಾಳೆ. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ರಿವಾಲ್ವರ್ ವಶಕ್ಕೆ ಪಡೆದಿದ್ದಾರೆ .