ಬೆಳಗಾವಿ: ಹೆಂಡತಿಯ ಕಾಟದಿಂದ ಬೇಸತ್ತು ಗುತ್ತಿಗೆದಾರ 26 ಲಕ್ಷದೊಂದಿಗೆ ಪರಾರಿಯಾಗುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮುಂಬೈನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನಾಗಿರುವ ವ್ಯಕ್ತಿಯೊಬ್ಬ, ಹೆಂಡತಿಯ ಕಾಟದಿಂದ ಬೇಸತ್ತಿದ್ದನು. ಈ ಕಾರಣದಿಂದಾಗಿಯೇ ಗೋವಾದಲ್ಲಿನ ಕ್ಯಾಸಿನೋಗೆ ತೆರಳೋ ಪ್ಲಾನ್ ಮಾಡಿದ್ದನು. ಅದಕ್ಕಾಗಿ ಗೂಗಲ್ ಮ್ಯಾಪ್ ಸರ್ಚ್ ಮಾಡಿ, ಮುಂಬೈನಿಂದ ಗೋವಾಗೆ ತನ್ನ ಕಾರಿನಲ್ಲಿ ಮನೆಯಿಂದ 26 ಲಕ್ಷ ಹಣ ತುಂಬಿಕೊಂಡು ತೆರಳಿದ್ದಾನೆ.
ಬೆಳಗಾವಿಯ ಕರ್ನಾಟಕ ಚೌಕ್ ಬಳಿಯಲ್ಲಿ ಮುಂಬೈನಿಂದ ಬರುತ್ತಿದ್ದಂತ ಕಾರುಗಳನ್ನು ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಚೆಕ್ ಮಾಡಲಾಗುತ್ತಿತ್ತು. ಮುಂಬೈನಿಂದ 26 ಲಕ್ಷ ಕಾರಿನಲ್ಲಿ ತುಂಬಿಕೊಂಡು ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದಂತ ಗುತ್ತಿಗೆದಾರನ ಕಾರು ಚೆಕ್ ಮಾಡಿದಾಗ ಹಣ ಪತ್ತೆಯಾಗಿದೆ.
ಈ ಬಗ್ಗೆ ಚೆಕ್ ಪೋಸ್ಟ್ ನಲ್ಲಿದ್ದಂತ ಸಿಬ್ಬಂದಿ ವಿಚಾರಣೆ ನಡೆಸಿದಾಗ, ತಾನು ಹೆಂಡತಿಯ ಕಾಟ ತಾಳಲಾರದೇ ನೆಮ್ಮದಿ ಅರಸಿ ಗೋವಾಕ್ಕೆ ತೆರಳುತ್ತಿದ್ದೆನು. ಮುಂಬೈನಲ್ಲಿ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿದ್ದೇನೆ. ಆನ್ ಲೈನ್ ಪೇಮೆಂಟ್ ಮಾಡಿದರೇ ಪತ್ನಿ ಚೆಕ್ ಮಾಡುತ್ತಾಳೆ ಎನ್ನುವ ಕಾರಣ ಕಾರಿನಲ್ಲಿ 26 ಲಕ್ಷ ಕ್ಯಾಶ್ ತುಂಬಿಕೊಂಡು ಬಂದಿದ್ದೆನು. ತಪ್ಪಾಗಿ ಸಿಟಿಗೆ ಬಂದು ಬಿಟ್ಟೆ. ಕ್ಷಮಿಸಿ ಎಂಬುದಾಗಿ ಹೇಳಿದ್ದಾನೆ.
ಆತನ ವಿಷಯ ಕೇಳಿದಂತೆ ಬೆಳಗಾವಿಯ ಚೆಕ್ ಪೋಸ್ಟ್ ಪೊಲೀಸರು, ಆತನ ಹಣದ ಬಗ್ಗೆ ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಈಗ ಹೆಂಡತಿಯ ಕಾಟಕ್ಕೆ ತಾಳಲಾರದೇ 26 ಲಕ್ಷ ಹಣ ತುಂಬಿಕೊಂಡು ಗೋವಾಗೆ ಹೊರಟಿದ್ದ ಗುತ್ತಿಗೆದಾರನಿಗೆ ಐಟಿ ಅಧಿಕಾರಿಗಳ ಕಾಟ ಶುರುವಾಗಿದೆ.