ಚಿಕ್ಕಮಗಳೂರು: ಪತ್ನಿ ತವರು ಸೇರಿದ್ದಕ್ಕೆ ಪತ್ನಿ ಮನೆಗೆ ಪತಿ ಮಾಟ ಮಾಡಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ತನ್ನ ಜೊತೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಪತಿ ಮಾಟ ಮಾಡಿಸಿದ್ದಾನೆ.
ಮರಸಣಿಗೆ ಗ್ರಾಮದ ಗುರುಮೂರ್ತಿ ಎಂಬಾತ ಸುಮಿತ್ರ ಎಂಬವರನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಹಲವು ಬಾರಿ ಗಂಡ ಹೆಂಡತಿ ಮಧ್ಯೆ ಜಗಳ ನಡೆದು ಹಿರಿಯರು ರಾಜಿ ಮಾಡಿಸುತ್ತಲೇ ಇದ್ದರೆನ್ನಲಾಗಿದೆ.
ಒಂದು ತಿಂಗಳ ಹಿಂದೆ ಮತ್ತೆ ಜಗಳವಾದ ಕಾರಣ ಪತ್ನಿ ಸುಮಿತ್ರಾ ಅಣ್ಣನ ಮನೆಗೆ ತೆರಳಿದ್ದರು. ಇದರಿಂದ ಕೋಪಗೊಂಡ ಗುರುಮೂರ್ತಿ ಸುಮಿತ್ರ ಅಣ್ಣನ ಮನೆಗೆ ಮಾಟ ಮಾಡಿಸಿದ್ದಲ್ಲದೇ ಸುಮಿತ್ರ ಅಣ್ಣನಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ವ್ಯಕ್ತವಾಗಿದೆ.
ಮನೆ ಮುಂದೆ ಪ್ರಾಣಿ ಬಲಿ ಕೊಟ್ಟು ವಾಮಾಚಾರದ ಆರೋಪ ಮಾಡಿರುವ ಸುಮಿತ್ರ ಅಣ್ಣ ಗುರುಮೂರ್ತಿ ವಿರುದ್ಧ ವಾಮಾಚಾರ ಮತ್ತು ಕೊಲೆಯತ್ನದ ಕುರಿತು ಬಣಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.ದೂರಿನ ಹಿನ್ನೆಲೆಯಲ್ಲಿ ಬಣಕಲ್ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.