
ಮುಂಬೈ,: ದೆಹಲಿಯ ಕೆಂಪು ಕೋಟೆಯ ಬೆನ್ನಲ್ಲೇ, ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ಗೂ ಭಾನುವಾರ ಮಧ್ಯರಾತ್ರಿ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ತೀವ್ರ ಆತಂಕ ಸೃಷ್ಟಿಸಿತ್ತು.
ಭಾನುವಾರ ಮಧ್ಯರಾತ್ರಿ 12:13 ರ ಸುಮಾರಿಗೆ ನವಿ ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಅಪರಿಚಿತನೊಬ್ಬ, “ದಾವೂದ್ ಇಬ್ರಾಹಿಂ ತಾಜ್ ಹೋಟೆಲ್ನಲ್ಲಿ ಬಾಂಬ್ ಇಟ್ಟಿದ್ದು, ಹೋಟೆಲ್ ಸ್ಫೋಟಿಸಲಾಗುವುದು” ಎಂದು ಬೆದರಿಕೆ ಹಾಕಿದ್ದನು. 2008ರ 26/11 ದಾಳಿಯ ಹಿನ್ನೆಲೆಯಲ್ಲಿ ಪೊಲೀಸರು ಈ ಕರೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಹೈ ಅಲರ್ಟ್ ಘೋಷಿಸಿದರು.
ಕೊಲಾಬಾ ಪೊಲೀಸ್, ಕ್ರೈಮ್ ಬ್ರಾಂಚ್ ಹಾಗೂ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ಶ್ವಾನ ದಳದೊಂದಿಗೆ ಹೋಟೆಲ್ನ ಲಾಬಿ, ಈಜುಕೊಳ, ರೆಸ್ಟೋರೆಂಟ್ಗಳು ಮತ್ತು ಪಾರ್ಕಿಂಗ್ ಪ್ರದೇಶ ಸೇರಿದಂತೆ ಮೂಲೆ ಮೂಲೆಗಳಲ್ಲಿ ತೀವ್ರ ತಪಾಸಣೆ ನಡೆಸಿತು. ಹಲವು ಗಂಟೆಗಳ ಜಾಲಾಟದ ನಂತರ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಕಾರಣ, ಇದೊಂದು ಹುಸಿ ಕರೆ ಎಂದು ಪೊಲೀಸರು ಖಚಿತಪಡಿಸಿದರು.
ತಾಂತ್ರಿಕ ತನಿಖೆಯ ಪ್ರಕಾರ ಈ ಕರೆ ನವಿ ಮುಂಬೈನ ‘ತುರ್ಭೆ’ ಪ್ರದೇಶದಿಂದ ಬಂದಿರುವುದು ಪತ್ತೆಯಾಗಿದ್ದು, ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಆರೋಪಿಯ ಬಂಧನಕ್ಕಾಗಿ ಮುಂಬೈ ಮತ್ತು ನವಿ ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕೇವಲ ಒಂದು ದಿನದ ಮುನ್ನವಷ್ಟೇ (ಜುಲೈ 11) ದೆಹಲಿಯ ಕೆಂಪು ಕೋಟೆಗೂ ಇಂತಹುದೇ ಹುಸಿ ಬಾಂಬ್ ಕರೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.


