ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಏಪ್ರಿಲ್ 16 ರ ರಾತ್ರಿ ನಡೆದ ಗಲಾಟೆಯ ಮಾಸ್ಟರ್ ಮೈಂಡ್ ಮೌಲ್ವಿ ವಸೀಂ ಪಠಾಣ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ಧಾರೆ. ಇಂದು ವಸೀಂ ಅಜ್ಞಾತ ಸ್ಥಳದಿಂದ ವೀಡಿಯೋ ಬಿಡುಗಡೆ ಮಾಡಿ ಘಟನೆಯಲ್ಲಿ ನನ್ನದೇನೂ ತಪ್ಪಿಲ್ಲ ಎಂದು ತಿಳಿಸಿದ್ದ. ವೀಡಿಯೋ ಬಿಡುಗಡೆಯಾದ ಬೆನ್ನಲ್ಲೇ ಪೊಲೀಸರು ಆತನನ್ನು ಬಂಧಿಸಿ ಕರೆತಂದಿದ್ದಾರೆ. ಹುಬ್ಬಳ್ಳಿಯಲ್ಲಿ ಗಲಾಟೆಯ ಕಿಡಿ ಹೊತ್ತಿಸಿದ್ದ ಮೌಲ್ವಿ ಆ ಬಳಿಕ ಗಾಯಬ್ ಆಗಿದ್ದ. ಆತ ಮುಂಬೈಗೆ ತೆರಳಿ ಅಲ್ಲಿ ತಲೆ ಮರಿಸಿಕೊಂಡಿದ್ದ. ಆತನ ಬೆನ್ನು ಬಿದ್ದಿದ್ದ ಪೊಲೀಸರು ಮುಂಬೈನಲ್ಲಿ ವಸೀಂ ನನ್ನು ಬಂಧಿಸಿ ಬಿಗಿಭದ್ರತೆಯಲ್ಲಿ ಹುಬ್ಬಳ್ಳಿಗೆ ಕರೆತಂದಿದ್ದಾರೆ.
ಹುಬ್ಬಳ್ಳಿಯಿಂದ ಮುಂಬೈಗೆ ತೆರಳಿದ್ದ ವಸೀಂ ಹುಬ್ಬಳ್ಳಿಯ ವ್ಯಕ್ತಿಯ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಇಲ್ಲಿನ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯುತ್ತಿದ್ದ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶೋಕ್ ಚೌಹಾಣ್ ನೇತೃತ್ವದ 8 ಜನರ ತಂಡ ವಸೀಂ ನ ಕಾಲ್ ಡೀಟೇಲ್ಸ್ ಆಧರಿಸಿ ಆತನ ಪತ್ತೆಗೆ ಮುಂದಾಗಿತ್ತು. ಕಾಲ್ ಲೊಕೇಶನ್ ಆಧರಿಸಿ ಪೊಲೀಸರು ಮುಂಬೈನ ಕಡಲ ಕಿನಾರೆಯ ಬಳಿಯ ಮನೆಯೊಂದರ ಬಳಿಗೆ ತಲುಪಿದ್ದರು. ಬಳಿಕ ಆತನನ್ನು ಮುಂಬೈನಲ್ಲಿ ಬಂಧಿಸಿ ಹುಬ್ಬಳ್ಳಿಗೆ ಕರೆದು ತಂದಿದ್ದಾರೆ. ಅಸಲಿಗೆ ಪೊಲೀಸರು ನಿನ್ನೆ ರಾತ್ರಿಯೇ ವಸೀಂ ನನ್ನು ಬಂಧಿಸಿದ್ದು, ಅಲ್ಲಿಂದ ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ಕರೆತಂದಿದ್ದಾರೆ.