ಉಡುಪಿ: ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಹಿರಿಯಡ್ಕದ ಅಂಜಾರು ಗ್ರಾಮದ ಓಂತಿಬೆಟ್ಟು ಶಾಲೆಯ ಬಳಿ ನಡೆದಿದೆ.
ಓಂತಿಬೆಟ್ಟುವಿನ ಶಂಕರ ಟಿ.ಶೆಟ್ಟಿ ಎಂಬವರು ಮನೆಗೆ ಬೀಗ ಹಾಕಿ ಪತ್ನಿಯೊಂದಿಗೆ ಹಿರಿಯಡ್ಕ ದೇವಸ್ಥಾನಕ್ಕೆ ಹೋಗಿ, ವಾಪಾಸ್ ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಅಡುಗೆ ಮನೆಯ ಕಡೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮಲಗುವ ಕೋಣೆಯ ಮರದ ಕಪಾಟಿನಲ್ಲಿದ್ದ ಚಿನ್ನದ ಚೈನ್ ಹಾಗೂ ಆರು ಚಿನ್ನದ ಬಳೆ, ಎರಡು ಚಿನ್ನದ ಕೈಯ ಕಡಗ ಬಳೆ ಮತ್ತು ಅದೇ ಕೋಣೆಯ ಕಬ್ಬಿಣದ ಕಪಾಟಿನ ಲಾಕರ್ನಲ್ಲಿಟ್ಟಿದ್ದ ಎರಡು ಉಂಗುರ ಹಾಗೂ 20,000 ರೂ. ನಗದು ಹಾಗೂ ಪಕ್ಕದ ಇನ್ನೊಂದು ಮಲಗುವ ಕೋಣೆಯ ಕಬ್ಬಿಣದ ಕಪಾಟಿನಲ್ಲಿದ್ದ ಕೆನಾನ್ ಕ್ಯಾಮರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ,
ಕಳವು ಮಾಡಿದ ಒಟ್ಟು 242 ಗ್ರಾಂ ಚಿನ್ನಾಭರಣ ಸಹಿತ ಎಲ್ಲ ಸೊತ್ತುಗಳ ಒಟ್ಟು ವೌಲ್ಯ 8,50,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.