ಉಡುಪಿ: ಲೋಕಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಸೋಲಿನ ಕುರಿತು ಆತ್ಮಾವಲೋಕನ ಮಾಡಬೇಕಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಉಡುಪಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಡಾ. ಪರಮೇಶ್ವರ್, ಯಾಕೆ ಸೋತಿದ್ದೇವೆ ಮತ್ತು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗಬೇಕಿದೆ ಎಂದು ತಿಳಿಸಿದ್ದಾರೆ.
ಜನಸಾಮಾನ್ಯರ ಬಡತನ ನಿರ್ಮೂಲನೆಗೆ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದೆವು, ಗ್ಯಾರೆಂಟಿ ಯೋಜನೆ ನಿಲ್ಲಿಸುವುದಿಲ್ಲ ಮತ್ತು ಅದು ರಾಜಕೀಯ ಉದ್ದೇಶಕ್ಕಲ್ಲ ಎಂದು ಹೇಳಿರುವ ಗೃಹ ಸಚಿವರು, ಸೋಲಿನ ಬಗ್ಗೆ
ಸಮಿತಿ ರಚಿಸಿ ಹಿರಿಯರು ಮತ್ತು ಅನುಭವಿಗಳ ವಿಶ್ಲೇಷಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಎನ್ಡಿಎ ಎಷ್ಟು ಸುಭದ್ರವಾಗಿರುತ್ತದೆ ಎಂದು ಕಾದು ನೋಡೋಣ ಎಂದಿರುವ ಪರಮೇಶ್ವರ್,
ಜನರು ಬಿಜೆಪಿ ಮತ್ತು ಎನ್ ಡಿಎಯನ್ನು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿದ್ದು,
ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ನ ವೋಟ್ ಶೇರ್ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ, ನಾವು ನಮ್ಮ ನಿರೀಕ್ಷೆಗೆ ತಲುಪಿಲ್ಲ, ಕಾಂಗ್ರೆಸ್ ಸ್ವಲ್ಪ ಫೈನ್ ಟ್ಯೂನಿಂಗ್ ಮಾಡಿಕೊಳ್ಳಬೇಕಾಗುತ್ತದೆ ಎಂದೂ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.