ಬೆಂಗಳೂರು: ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ಫೈರ್ ಮನ್ ಹುದ್ದೆಗಳಿಗೆ ಆಯ್ಕೆಯಾಗಿ ನೇಮಕಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ನಿರ್ದೇಶನ ನೀಡಿದ್ದಾರೆ.
ಈ ಬಗ್ಗೆ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ಕ್ರಮ ಕೈಗೊಂಡಿದ್ದು, ಇದುವರೆಗೆ ಒಟ್ಟು ೬೦೭ ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದಿದ್ದಾರೆ.
ಇನ್ನುಳಿದ ಅಭ್ಯರ್ಥಿಗಳು ಆಯ್ಕೆ ಸಿಂಧುತ್ವವನ್ನೂ ಪಡೆದಿದ್ದು, ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ರಾಜ್ಯ ಸರಕಾರವು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆ ಗಳನ್ನು ಆದ್ಯತೆ ಮೇರೆಗೆ ಸ್ಥಾಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ, ಹುದ್ದೆಗಳ ಭರ್ತಿಗೆ ಸಹ ಕ್ರಮ ಕೈಗೊಂಡಿದೆ.
ಇಲಾಖೆಯಲ್ಲಿ ಒಟ್ಟು 7057 ವಿವಿಧ ಶ್ರೇಣಿಯ ಹುದ್ದೆಗಳಿದ್ದು ಕಳೆದ ವರ್ಷದ ಅಂತ್ಯಕ್ಕೆ ಸುಮಾರು 2627 ಹುದ್ದೆಗಳು ಖಾಲಿಯಿದ್ದು ಪ್ರಸ್ತುತ ವರ್ಷ 1567 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ ಸರಕಾರ ವಿಶೇಷ ಕ್ರಮ ಕೈಗೊಂಡು ನೂತನ ಕಟ್ಟಡಗಳೂ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.