ಹೈದರಾಬಾದ್: ಇಲ್ಲಿನ ಸರೂರ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ಮರ್ಯಾದೆ ಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಬಿ ನಾಗರಾಜು ಕೊಲೆಯಾದ ವ್ಯಕ್ತಿ. ಈತ ಬುಧವಾರ ರಾತ್ರಿ ತನ್ನ ಪತ್ನಿ ಪಲ್ಲವಿ (ಸೈಯದಾ ಅಶ್ರಿನ್ ಫಾತಿಮಾ) ಅವರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಡ್ಡಗಟ್ಟಿದ್ದ ಅಶ್ರಿನ್ ಫಾತಿಮಾಳ ಕುಟುಂಬಸ್ಥರು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕೊಲೆಯಾದ ನಾಗರಾಜು ಮತ್ತು ಪತ್ನಿ ಅಶ್ರಿನ್ ಫಾತಿಮಾ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರಿಗೆ ಗೊತ್ತಾಗಿ, ಫಾತಿಮಾ ಮನೆಯವರು ನಾಗರಾಜು ಗೆ ಎಚ್ಚರಿಕೆ ಕೊಟ್ಟಿದ್ದರು. ಅದನ್ನು ಲೆಕ್ಕಿಸದೆ ಈ ವರ್ಷದ ಜನವರಿಯಲ್ಲಿ ನಾಗರಾಜು ಮತ್ತು ಅಶ್ರಿನ್ ಫಾತಿಮಾ ಓಲ್ಡ್ ಸಿಟಿಯ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದರು.
ಇದು ಅಂತರ್ ಧರ್ಮೀಯ ವಿವಾಹವಾಗಿರುವುದರಿಂದ ಫಾತಿಮಾಳ ಸಂಬಂಧಿಕರು ನಾಗರಾಜುಗೆ ಬೆದರಿಕೆ ಹಾಕಿದ್ದರು. ಆಕೆಯನ್ನು ಬಿಟ್ಟು ಬಿಡುವಂತೆ ಧಮ್ಮಿ ಹಾಕಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ರಾಚಕೊಂಡ ಪೊಲೀಸ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.