ಉಡುಪಿ: ಶಿಕ್ಷಣ ಸಚಿವರು ಸಂಘಪರಿವಾರ ಮತ್ತು ಎಬಿವಿಪಿಯ ದುಷ್ಕೃತ್ಯಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಆರೋಪಿಸಿದೆ.
”ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಸ್ಥಳೀಯವಾಗಿಯೇ ಬಗೆಹರಿಯಬಹುದಿತ್ತು ಆದರೆ ಸ್ಥಳೀಯ ಶಾಸಕರ ಪ್ರೋತ್ಸಾಹದಿಂದ ರಾಜ್ಯದ ಇತರೆ ಜಿಲ್ಲೆಗಳಿಗೂ ಹಬ್ಬಿಸಿದ್ದಾರೆ. ಫೆಬ್ರುವರಿ 8ರಿಂದ ಹೈಕೋರ್ಟಿನಲ್ಲಿ ಹಿಜಾಬ್ ಕುರಿತು ವಿಚಾರಣೆ ನಡೆಯುತ್ತಿರುವಾಗಲೇ ರಾಜ್ಯದಲ್ಲಿ ಈ ಅವಾಂತರಗಳನ್ನು ಸೃಷ್ಟಿಸುತ್ತಿರುವುದರ ಹಿಂದೆ ಎಬಿವಿಪಿ ಮತ್ತು ಸಂಘಪರಿವಾರದ ಮುಖಂಡನ ಕೈವಾಡವಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಹೇಳಿದ್ದಾರೆ.
ರಾಷ್ಟ್ರ ಧ್ವಜಾರೋಹಣ ಮಾಡಲು ಉದ್ದೇಶಿಸಿರುವ ಧ್ವಜದ ಕಂಬದ ಮೇಲೆ ಸಂಘ ಪರಿವಾರದವರು ಭಗವಧ್ವಜ ಹಾರಿಸಿರುವುದು, ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದು, ಕೇಸರಿ ಶಾಲುಗಳನ್ನು ನೀಡಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲು ಪ್ರಚೋದಿಸಿದ್ದು, ಸಾರ್ವಜನಿಕ ಆಸ್ತಿ ನಾಶಪಡಿಸಿದ್ದು, ದಾಳಿ ನಡೆಸಿರುವುದು ಸ್ಪಷ್ಟವಾಗಿದೆ. ಮಂಡ್ಯ ಕಾಲೇಜಿಗೆ ತೆರಳುತ್ತಿದ್ದ ಒಂಟಿ ವಿದ್ಯಾರ್ಥಿನಿ ವಿದ್ಯಾರ್ಥಿನಿಯೊಬ್ಬಳಿಗೆ ಕುಂಕುಮ ಹಾಕುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದಿದ್ದಾನೆ.ಆದರೆ ಭಗವ ಧ್ವಜ ಹಾರಿಸಿದ ಕಿಡಿಗೇಡಿಗಳ ವಿರುದ್ಧ ಇದುವರೆಗೂ ಪ್ರಕರಣ ದಾಖಲಾಗಿಲ್ಲ ಅಹಿತಕರ ಘಟನೆಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಮೌನ ವಹಿಸಿರುವುದು ವಿಪರ್ಯಾಸ. ,” ಅವರು ಹೇಳಿದರು.
“ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ನಾಗೇಶ್ ಅವರು ಮಾಡಿರುವ ಆಧಾರರಹಿತ ಆರೋಪ ಖಂಡನೀಯ. ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳಿಗಾಗಿ ಸದಾ ಮುಂದೆ ನಿಂತು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಿದೆ ಎಂದು ಸ್ಪಷ್ಟಪಡಿಸುತ್ತಿದೆ ಎಂದು ಹೇಳಿದರು.