ಬೆಂಗಳೂರು: ರಾಜ್ಯದಲ್ಲಿ ತಾರಕ್ಕೇರಿರುವಂತ ಹಿಜಾಬ್ ವಿರೋಧಿಸಿ, ಕೇಸರಿ ಶಾಲು ಪ್ರಕರಣಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕೋದಲ್ಲೆ ಸರ್ಕಾರ, ಇಂದಿನಿಂದ 3 ದಿನ ಹೈಸ್ಕೂಲ್, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಈ ನಡುವೆ ನಿನ್ನೆ ವಿಚಾರಣೆ ಆರಂಭಗೊಂಡಿದ್ದಂತ ಹಿಜಾಬ್ ಅನುಮತಿ ಕೋರಿ ಅರ್ಜಿಯ ವಿಚಾರಣೆ, ಇಂದು ಹೈಕೋರ್ಟ್ ನಲ್ಲಿ ಮುಂದುವರೆದಿದೆ. ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ, ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ್ದಾರೆ.
ಇಂದು ಮಧ್ಯಾಹ್ನ 2.30ರ ಬಳಿಕ ಹೈಕೋರ್ಟ್ ನಲ್ಲಿ ಹಿಜಾಬ್ ಧರಿಸೋದಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ಆರಂಭಗೊಂಡಿತು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಅರ್ಜಿದಾರರು ಅನುಮತಿ ನೀಡಿದ್ರೇ. ಈ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗುವುದು ಎಂದರು.
ನಿನ್ನೆಯಿಂದ ಪ್ರಕರಣ ಸಂಬಂಧದ ವಾದವನ್ನು ಆಲಿಸಲಾಗಿದೆ. ಅರ್ಜಿಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವಹಿಸುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂಬುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.
ಈ ವೇಳೆ ಹಿರಿಯ ವಕೀಲ ಸಂಜಯ್ ಹೆಗಡೆ ಅವರು ತಮ್ಮ ವಾದವನ್ನು ನ್ಯಾಯಪೀಠದ ಮುಂದೆ ಇಟ್ಟು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಎರಡು ತಿಂಗಳಲ್ಲಿ ಮುಗಿಯಲಿದೆ. ಆದರೊಳಗೆ ವಿವಾದ ಬಗೆ ಹರಿಯಬೇಕು. ಈ ಅರ್ಜಿಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅವಶ್ಯಕತೆ ಇಲ್ಲ ಎಂಬುದಾಗಿ ಹೇಳಿದರು. ಈ ಎಲ್ಲಾ ಬೆಳವಣಿಗೆ ನಡುವೆ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಮುಂದುವರೆದಿದೆ.