ಬೆಂಗಳೂರು: ಪತ್ನಿಯೊಂದಿಗೆ ಭಾವನಾತ್ಮಕ ಬಾಂಧವ್ಯವಿಲ್ಲದೆ ಕೇವಲ ಆಕೆಯನ್ನು ‘ಧನಲಕ್ಷ್ಮಿ’ಯಂತೆ ಬಳಸುವುದು ಕೂಡ ಮಾನಸಿಕ ಕ್ರೌರ್ಯವಾಗುತ್ತದೆ.
ಈ ರೀತಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅದೇ ಆಧಾರದ ಮೇಲೆ ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಪತಿಯಿಂದ ಪತ್ನಿಗೆ ಮುಕ್ತಿ ಕೊಡಿಸಿದೆ. ಅಂದರೆ ವಿಚ್ಛೇದನ ಮಂಜೂರು ಮಾಡಿದೆ.
ಪತ್ನಿಯ ದುಡ್ಡಿನಲ್ಲೇ ಮಜಾ ಉಡಾಯಿಸಿಕೊಂಡಿರುವ ಪತಿ ರಾಯರಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಿದೆ. ಪತ್ನಿಯನ್ನು ಕೇವಲ ಹಣದ ದೃಷ್ಟಿಯಿಂದ ನೋಡದೆ, ಭಾವನಾತ್ಮಕವಾಗಿ ಬಾಳ್ವೆ ನಡೆಸಬೇಕೆಂಬ ಸಂದೇಶವನ್ನು ನ್ಯಾಯಾಲಯ ರವಾನಿಸಿದೆ.
ಅಧೀನ ನ್ಯಾಯಾಲಯ ವಿವಾಹ ವಿಚ್ಛೇದನ ಮಂಜೂರು ಮಾಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಪತ್ನಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾ. ಅಲೋಕ್ ಅರಾಧೆ ಮತ್ತು ಜೆ. ಎಂ. ಖಾಜಿ ಅವರನ್ನು ಒಳಗೊಂಡ ನ್ಯಾಯಪೀಠ, ಈ ಆದೇಶ ಮಾಡಿದೆ.
ಪ್ರಕರಣದ ವಿವರಗಳನ್ನು ಗಮನಿಸಿ, ಪತ್ನಿ ನೀಡಿರುವ ಲೆಕ್ಕ ಪತ್ರ ನೋಡಿದರೆ ಪತಿಯು ಪತ್ನಿಯಿಂದ ಸುಮಾರು 60 ಲಕ್ಷದಷ್ಟು ಸಾಲ ತೀರಿಸಲು, ಹೊಸದಾಗಿ ವ್ಯಾಪಾರ ಮಾಡಲು ಖರ್ಚು ಮಾಡಿಸಿದ್ದಾನೆ. ಪತ್ನಿಯನ್ನು ನಗದು ಗೋಮಾತೆಯಂತೆ ಪರಿಗಣಿಸಿದ್ದಾನೆ. ಆದರೆ ಆಕೆಯ ಬಗ್ಗೆ ಆತನಲ್ಲಿ ಯಾವುದೇ ಬಾಂಧವ್ಯವಿಲ್ಲ. ಯಾಂತ್ರಿಕ ವರ್ತನೆ ಕಂಡು ಬಂದಿದೆ. ಪತಿಯ ವರ್ತನೆಯಿಂದ ಪತ್ನಿಗೆ ಮಾನಸಿಕ ಆಘಾತವಾಗಿದೆ’ ಎಂದು ನ್ಯಾಯಪೀಠ ಹೇಳಿದೆ.
‘ಪತಿ ನಡತೆಯಿಂದ ಪತ್ನಿಯ ಭಾವನೆಗಳಿಗೆ ಘಾಸಿಯಾಗಿದೆ. ಅದನ್ನು ಪತ್ನಿಗೆ ಆಗಿರುವ ಮಾನಸಿಕ ಕ್ರೌರ್ಯವೆಂದು ಪರಿಗಣಿಸಬಹುದಾಗಿದೆ. ಆದರೆ ಕೌಟುಂಬಿಕ ನ್ಯಾಯಾಲಯ ಈ ಎಲ್ಲ ಅಂಶಗಳನ್ನು ಪರಿಗಣಿಸುವಲ್ಲಿ ವಿಫಲವಾಗಿದೆ. ಜತೆಗೆ ಆಕೆಯನ್ನು ಪಾಟೀ ಸವಾಲಿಗೆ ಒಳಪಡಿಸಿ, ಆಕೆಯ ಅನಿಸಿಕೆಗಳನ್ನೂ ದಾಖಲಿಸಿಲ್ಲ. ಹಾಗಾಗಿ ಪತ್ನಿಯ ವಾದವನ್ನು ಒಪ್ಪಿ ವಿವಾಹ ವಿಚ್ಛೇದನ ಮಂಜೂರು ಮಾಡಲಾಗುತ್ತಿದೆ’ ಎಂದು ಕೋರ್ಟ್ ಆದೇಶಿಸಿದೆ.