ಉತ್ತರಾಖಂಡದಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದ್ದು ಇದುವರೆಗೂ 17 ಮಂದಿ ಸಾವನ್ನಪ್ಪಿದ್ದು, 9 ಸಾವಿರ ಯಾತ್ರಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಕೇದಾರನಾಥ ದೇವಾಲಯಕ್ಕೆ ಚಾರಣ ಮಾರ್ಗದಲ್ಲಿ ಸಿಲುಕಿದ್ದ 9,000 ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ.
ಇನ್ನು ಜುಲೈ 31 ರಂದು ಲಿಂಚೋಲಿ ಬಳಿಯ ಜಂಗಲ್ಚಟ್ಟಿಯಲ್ಲಿ ಮೇಘಸ್ಫೋಟ ಸಂಭವಿಸಿದ ಕೇದಾರನಾಥಕ್ಕೆ ಸಾಗುವ ಮಾರ್ಗವು ಭಾರೀ ಹಾನಿಗೆ ಒಳಗಾಗಿದೆ. ಗೌರಿಕುಂಡ್-ಕೇದಾರನಾಥ ಚಾರಣ ಮಾರ್ಗದಲ್ಲಿ ಭೀಮಬಲಿಯ ಆಚೆಗೆ 20-25 ಮೀಟರ್ ಉದ್ದದ ರಸ್ತೆ ಮಂದಾಕಿನಿ ನದಿಯ ನೀರು ಬಂದ ಪರಿಣಾಮ ಕೊಚ್ಚಿಹೋಗಿದೆ. ಈ ವೇಳೆ ಯಾತ್ರಾರ್ಥಿಗಳು ಸಿಕ್ಕಿಬಿದ್ದಿದ್ದರು.
ಗುರುವಾರ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ಕೇದಾರನಾಥ, ಗೌರಿಕುಂಡ್ ಮತ್ತು ಸೋನ್ಪ್ರಯಾಗ್ ಪ್ರದೇಶಗಳಲ್ಲಿ 1,000 ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸ್ಥಳಾಂತರಿಸಲು ಇನ್ನೂ ಕಾಯುತ್ತಿದ್ದಾರೆ. ಆಗಸ್ಟ್ 8 ರವರೆಗೆ ಉತ್ತರಾಖಂಡದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಕ್ಕಿಬಿದ್ದ ಯಾತ್ರಾರ್ಥಿಗಳಿಗೆ ಆಹಾರ, ನೀರು ಮತ್ತು ಆಶ್ರಯವನ್ನು ಒದಗಿಸಲು ಮತ್ತು ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು 882 ಪರಿಹಾರ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.