ಬೆಳ್ತಂಗಡಿ: ದೇಶದಾದ್ಯಂತ ಕೊರೊನಾ ಅಬ್ಬರ ಹೇಗಿದೆ ಅಂತಾ ಎಲ್ಲರಿಗೂ ಗೊತ್ತೇ ಇದೆ. ಅದೆಷ್ಟೋ ಆಸ್ಪತ್ರೆಗಳಲ್ಲಿ ಊಟ. ನಿದ್ರೆ ಬಿಟ್ಟು ಆರೋಗ್ಯ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ ನಾವು ಹ್ಯಾಟ್ಪಾಫ್ ಹೇಳಲೇ ಬೇಕು. ಇದೀಗ ಅವರ ಸೇವೆ ನೋಡಿ ಸ್ವತಃ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ಅವರೇ ಅಭಿನಂದನೆ ಸಲ್ಲಿಸಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಕೊರಗ ಕಾಲೋನಿಯಿದೆ. ಇಲ್ಲಿ 40 ಕ್ಕೂ ಹೆಚ್ಚು ಕುಟುಂಬಗಳಿವೆ. ಇವುಗಳಲ್ಲಿ ಬಹುತೇಕರು ಡೆಂಗ್ಯೂ ಸೇರಿದಂತೆ ಇನ್ನಿತರ ಜ್ವರದ ಲಕ್ಷಣಗಳನ್ನು ಹೊಂದಿದ್ದಾರೆ. ಇನ್ನು ಈ ಗ್ರಾಮಕ್ಕೆ ಹೋಗೋದಕ್ಕೆ ಸರಿಯಾದ ಸೇತುವೆ ಕೂಡ ಇಲ್ಲ. ಉಕ್ಕಿ ಹರಿಯುತ್ತಿರುವ ನದಿ ತೊರೆಗಳನ್ನು ಅಪಾಯಕಾರಿ ಸೇತುವೆಗಳ ಮೂಲಕ ದಾಟಿ ಹೋಗುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜೀವವನ್ನೇ ಪಣಕ್ಕಿಟ್ಟು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಆರೋಗ್ಯ ಜಾಗ-ತಿ ಮೂಡಿಸುತ್ತಿದ್ದಾರೆ.
ಇದೀಗ ಇವರ ಸೇವೆಯನ್ನು ಗಮನಿಸಿರುವ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ಅವರು ಈ ಬಗ್ಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಕರ್ತವ್ಯ ನಿಷ್ಟೆ, ನಿಸ್ವಾರ್ಥ ಸೇವೆ ನಿಜಕ್ಕೂ ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ.