ಉಡುಪಿ: ರಾಜ್ಯದಲ್ಲಿ ಇತ್ತೀಚೆಗೆ ಭ್ರೂಣ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆದಿದೆ.
ಸಾರ್ವಜನಿಕರ ಮಾಹಿತಿ ಮೇರೆಗೆ ಉಡುಪಿ ಮತ್ತು ಕುಂದಾಪುರ ತಾಲೂಕುಗಳ ಏಳು ಕಡೆಗಳಲ್ಲಿ ಕ್ಲಿನಿಕ್ ಮತ್ತು ಲ್ಯಾಬ್ ಗಳ ಮೇಲೆ ದಾಳಿ ನಡೆಸಲಾಗಿದ್ದು, ಅನುಮತಿ ರಹಿತ ಕ್ಲಿನಿಕ್ ಮತ್ತು ನಕಲಿ ವೈದ್ಯರು ಕೂಡಾ ಪತ್ತೆಯಾಗಿದ್ದಾರೆ.
ದಾಳಿಯ ಸಂದರ್ಭದಲ್ಲಿ ಕ್ಲಿನಿಕ್ ಮತ್ತು ಲ್ಯಾಬ್ ಗಳಲ್ಲಿ ಹಲವು ಅನುಮಾನಾಸ್ಪದ ವಸ್ತುಗಳು ಕಂಡು ಬಂದಿದ್ದು ಅಧಿಕಾರಿಗಳು ಸೀಝ್ ಮಾಡಿ ಎಫ್ ಐಆರ್ ದಾಖಲಿಸಿದ್ದಾರೆ.ಸೀಝ್ ಮಾಡಿದ ವಸ್ತುಗಳನ್ನು ಹೆಚ್ಚಿನ ತನಿಖೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್ ಮತ್ತು ನಾವುಂದದ ನಂಬಿಯಾರ್ ಕ್ಲಿನಿಕ್ ನಲ್ಲಿ ಆಯುರ್ವೇದಿಕ್ ನೋಂದಣಿಯಲ್ಲಿ ಅಲೋಪತಿ ಚಿಕಿತ್ಸೆ ಆರೋಗ್ಯ ಇಲಾಖಾಧಿಕಾರಿಗಳ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.
ಇದೇ ವೇಳೆ ಪರವಾನಿಗೆ ಇಲ್ಲದೇ ಕಾರ್ಯಾಚರಿಸುತ್ತಿದ್ದ ಕ್ಲಿನಿಕಲ್ ಲ್ಯಾಬ್ ಗಳನ್ನೂ ಸೀಝ್ ಮಾಡಿ ಕೆಪಿಎಂಇ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಉಪ್ಪುಂದದ ಸುಷ್ಮಾ ಕ್ಲಿನಿಕಲ್ ಲ್ಯಾಬ್, ಕುಂದಾಪುರದ ಬಯೋಲಿನ್ ಕ್ಲಿನಿಕಲ್ ಲ್ಯಾಬ್ ಮತ್ತು ಆರೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ ಒಂದನ್ನು ಕೂಡಾ ಸೀಝ್ ಮಾಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.