ಮಂಗಳೂರು: ನಗರದಲ್ಲಿ ತಮ್ಮ ಕೆಲಸ ಒತ್ತಡದ ನಡುವೆಯೂ ಟ್ರಾಫಿಕ್ ಪೊಲೀಸ್ ಒಬ್ಬರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ವಾಹನ ಸವಾರರ ಕಷ್ಟ ಅರಿತು ಸ್ವತಃ ಗುಂಡಿ ಮುಚ್ಚಿ ಜನರ ಮನ ಗೆದ್ದಿದ್ದಾರೆ.
ಮಂಗಳೂರು ನಗರ ಪಶ್ಚಿಮ ಪಾಂಡೇಶ್ವರ ಸಂಚಾರಿ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ಶರಣಪ್ಪ ಎಂಬವರು ನಗರದ ಸ್ಟೇಟ್ ಬ್ಯಾಂಕ್ ಬಳಿಯ ರಾವ್ ಆಂಡ್ ರಾವ್ ಸರ್ಕಲ್ ಬಳಿಯ ರಸ್ತೆಯಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಯಿಂದ ದೊಡ್ಡ ದೊಡ್ಡ ಹೊಂಡ ನಿರ್ಮಾಣವಾಗಿತ್ತು. ಇಂದು ಬೆಳಿಗ್ಗೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರಣಪ್ಪ ಅವರು ವಾಹನ ಸವಾರರ ಕಷ್ಟ ನೋಡಲಾರದೇ ಇಂಟರ್ ಲಾಕ್ ತುಂಡುಗಳನ್ನು ಜೋಡಿಸಿ ರಸ್ತೆ ರಿಪೇರಿಗೆ ಇಳಿದಿದ್ದಾರೆ.
ಇದನ್ನು ಕಂಡ ರಿಕ್ಷಾ ಡ್ರೈವರ್ ಸೇರಿ ಹಲವರು ಇವರಿಗೆ ಕೈ ಜೋಡಿಸಿದರು. ಈ ಸಮಾಜಮುಖಿ ಕೆಲಸವನ್ನು ಸಾರ್ವಜನಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು ಶರಣಪ್ಪ ಅವರ ಸಮಾಜಮುಖಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.